
ನಿರೂಪಕಿ ಅನುಶ್ರೀ
ಚಿತ್ರ: ಇನ್ಸ್ಟಾಗ್ರಾಂ
ತಮ್ಮ ಮಾತಿನ ಶೈಲಿಯಲ್ಲೇ ಮೋಡಿ ಮಾಡಿ, ಚಟಪಟ ಅಂತ ಮಾತನಾಡುವ ಮೂಲಕ ಎಲ್ಲರ ಗಮನಸೆಳೆದಿರುವ ಕನ್ನಡದ ನಟಿ, ನಿರೂಪಕಿ ಅನುಶ್ರೀ ಅವರು ಈಗ ನಿರೂಪಣೆಯ ಹಾದಿಯಲ್ಲಿ ಬರೋಬ್ಬರಿ 20 ವರ್ಷಗಳ ಸಾರ್ಥಕ ಪಯಣವನ್ನು ಪೂರೈಸಿದ್ದಾರೆ. ಹೀಗಾಗಿ ಅಭಿಮಾನಿಗಳು, ಸ್ನೇಹಿತರು, ಸಿನಿ ತಾರೆಯರಿಂದ ಅನುಶ್ರೀಗೆ ಹಾರೈಕೆಗಳ ಮಹಾಪೂರವೇ ಹರಿದು ಬರುತ್ತಿವೆ.
ನಿರೂಪಕಿ ಅನುಶ್ರೀ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಲವು ದಶಕಗಳಿಂದ ಕನ್ನಡ ಕಿರುತೆರೆ ಲೋಕದಲ್ಲಿ ನಿರೂಪಣೆ ಮೂಲಕ ಕಮಾಲ್ ಮಾಡುತ್ತಾ ಬಂದಿರುವ ಅನುಶ್ರೀ ಅವರು ಸರಿಗಮಪ, ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೇರಿದಂತೆ ಹಲವು ಯಶಸ್ವಿ ರಿಯಾಲಿಟಿ ಶೋಗಳನ್ನು ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ನಡೆಸಿಕೊಂಡು ಬಂದಿದ್ದಾರೆ.
ಈಗ ಆ ಪಯಣಕ್ಕೆ 20 ವರ್ಷಗಳು ಸಂದಿವೆ. ಜೀ ಕನ್ನಡ ವಾಹಿನಿ ನಿರೂಪಕಿ ಅನುಶ್ರೀಗೆ ಉಡುಗೊರೆವೊಂದನ್ನು ನೀಡಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮತ್ತು ಕಿಲಾಡಿ ಜೂನಿಯರ್ಸ್ ಮಹಾಸಂಗಮ ನಡೆಯುತ್ತಿದ್ದ ವೇಳೆ ನಟಿ ತಮ್ಮ ನಿರೂಪಣೆಯ ಪಯಣದ ಪ್ರೋಮೊ ನೋಡಿ ಕಣ್ಣೀರಿಟ್ಟಿದ್ದಾರೆ.
ಅದೇ ವೇಳೆ ಭಾವುಕರಾಗಿ ಮಾತನಾಡಿದ ಅನುಶ್ರೀ, ‘ನೂರಾರು ಕನಸುಗಳಿತ್ತು, ಎಲ್ಲವನ್ನೂ ಕಟ್ಟಿಟ್ಟು, ದುಡಿಮೆಯನ್ನೇ ಕನಸಾಗಿ ಮಾಡಿಕೊಂಡು ಜೀವನ ಮಾಡಿದ ಆ ಅನುಶ್ರೀ, ಅಂದರೆ ನನಗೆ ನಾನೇ ಧನ್ಯವಾದಗಳನ್ನು ಹೇಳಲು ಇಷ್ಟ ಪಡುತ್ತೇನೆ. ನನ್ನ ಇಡೀ ಕುಟುಂಬದ ಮನೆ ಕಟ್ಟಿದ್ದೀರಾ. ಸಾಯುವವರೆಗೂ ಯಾವಾಗಲೂ ಚಿರಋಣಿಯಾಗಿರುತ್ತೇನೆ’ ಎಂದು ಕಣ್ಣೀರಿಟ್ಟಿದ್ದಾರೆ. ಕಿರು ವಿಡಿಯೊ ಮೂಲಕ ಅನುಶ್ರೀ ಅವರಿಗೆ ಕನ್ನಡದ ಹಲವು ನಿರೂಪಕರು ಶುಭ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.