ADVERTISEMENT

Bigg Boss 8: ದಿವ್ಯಾ ಸುರೇಶ್ ಅಳುತ್ತಿದ್ದರೂ ಸಂತೈಸದೆ ಸುಮ್ಮನಿದ್ದ ಸದಸ್ಯರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜೂನ್ 2021, 8:49 IST
Last Updated 28 ಜೂನ್ 2021, 8:49 IST
ಕಲರ್ಸ್ ಕನ್ನಡ ವಿಡಿಯೊ ಸ್ಕ್ರೀನ್ ಗ್ರ್ಯಾಬ್
ಕಲರ್ಸ್ ಕನ್ನಡ ವಿಡಿಯೊ ಸ್ಕ್ರೀನ್ ಗ್ರ್ಯಾಬ್   

ಬೆಂಗಳೂರು: ಟಾಸ್ಕ್ ಗೆಲ್ಲುವುದು, ಪೈಪೋಟಿ ಇದ್ದೇ ಇರುತ್ತದೆ. ಆದರೆ, ಒಬ್ಬ ಮಹಿಳಾ ಸ್ಪರ್ಧಿ ಅಳುತ್ತಿದ್ದರೂ ಮನೆಯ ಸದಸ್ಯರು ಮೌನ ವಹಿಸುವ ಮೂಲಕ ಬಿಗ್ ಬಾಸ್ ಮನೆಯ ವೀಕೆಂಡ್ ಎಪಿಸೋಡಲ್ಲಿ ಒಂದು ರೀತಿಯ ಕರುಣಾಹೀನ ಸ್ಥಿತಿ ನಿರ್ಮಾಣವಾಗಿತ್ತು.

ಚಕ್ರವರ್ತಿ ಚಂದ್ರಚೂಡ್ ಅವರು ಮಂಜು ಪಾವಗಡ ಅವರ ಬಗ್ಗೆ ಹರಿಹಾಯುತ್ತಾ.. ದಿವ್ಯಾ ಸುರೇಶ್ ಅವರನ್ನು ಮಲಗು ಬಾ.. ಪತ್ರವಳ್ಳಿ ಎಂಬುದಾಗಿ ಕರೆಯುತ್ತಾನೆ ಎಂದು ಹಳೆಯ ವಿಷಯ ಕೆದಕಿ ರಂಪಾಟ ಮಾಡಿದರು. ತಮಾಷೆಗೆ ನಡೆದಿದ್ದೆಂದರೂ ಕೇಳದೆ ವಿವಾದ ಸೃಷ್ಟಿಸಿದರು. ಇದರಿಂದ ನೊಂದುಕೊಂಡ ದಿವ್ಯಾ ಸುರೇಶ್, ಸುದೀಪ್ ಎದುರೇ ಕಣ್ಣೀರು ಹಾಕುತ್ತಿದ್ದರು. ಬ್ರೇಕ್‌ನಲ್ಲೂ ಸಹ ಅವರ ಅಳು ನಿಂತಿರಲಿಲ್ಲ. ಚಕ್ರವರ್ತಿ, ಮಂಜು ಅವರನ್ನು ಟಾರ್ಗೆಟ್ ಮಾಡಿದರಾದರೂ ನೋವುಂಡದ್ದು ದಿವ್ಯಾ ಸುರೇಶ್. ಈ ಸಂದರ್ಭ ಮನೆಯ ಇತರೆ ಮಹಿಳಾ ಸದಸ್ಯರು ಸೇರಿ ಎಲ್ಲರೂ ಸಂತೈಸದೇ ಮೌನ ವಹಿಸಿದ್ದು ಅಚ್ಚರಿಗೆ ಕಾರಣವಾಗಿತ್ತು.

ಎಲ್ಲ ಮುಗಿದ ಮೇಲೆ ಬಂದರು: ವೀಕೆಂಡ್ ಎಪಿಸೋಡ್ ಮುಗಿದ ಮೇಲೆ ರಘು ಬಂದು ದಿವ್ಯಾ ಪಕ್ಕದಲ್ಲಿ ಕುಳಿತು ಸಂತೈಸಲು ಮುಂದಾದರು. ಬಳಿಕ, ನಿಧಾನವಾಗಿ ಶುಭಾಪೂಂಜಾ ಸಹ ಸಮೀಪಕ್ಕೆ ಬಂದು, ಅವರ ಮಾತಿಗೆ ತಲೆಕೆಡಿಸಿಕೊಳ್ಳಬೇಡ. ಹೆಚ್ಚು ಪ್ರತಿಕ್ರಿಯೆ ಕೊಟ್ಟಷ್ಟು ನಮಗೆ ತೊಂದರೆ ಎಂದು ಹೇಳಿದರು.

ADVERTISEMENT

ಚಂದ್ರಚೂಡ್ ಬಗ್ಗೆ ಭಯವೇ?: ಮನೆಯ ಸದಸ್ಯರು ಚಕ್ರವರ್ತಿ ಚಂದ್ರಚೂಡ್ ಅವರನ್ನು ಕಂಡರೆ ಕೊಂಚ ಭಯಗೊಂಡಂತೆ ಗೋಚರಿಸುತ್ತಿತ್ತು. ಬಿಗ್ ಬಾಸ್ ಸ್ಥಗಿತಗೊಂಡಾಗ ಸಂದರ್ಶನಗಳಲ್ಲಿ ಮಾತನಾಡಿದ್ದ ಚಂದ್ರಚೂಡ್, ಇತರರ ವಿರುದ್ಧ ವಿವಾದ ಎನ್ನುವಂತಹ ಹೇಳಿಕೆ ನೀಡಿದ್ದರು. ಮೂರು ಜೋಡಿಗಳಿವೆ ಎಂಬ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಸ್ವತಃ ವೈಷ್ಣವಿ ಅವರು ಬಿಗ್ ಬಾಸ್ ಮನೆಯಲ್ಲಿ ಈ ಬಗ್ಗೆ ಪ್ರಶ್ನೆ ಎತ್ತಿದ್ದರು. ಹಾಗಾಗಿಯೇ, ಅವರನ್ನು ಎದುರು ಹಾಕಿಕೊಂಡ ಮನೆಯ ಸದಸ್ಯರ ಬೆಂಬಲಕ್ಕೆ ಇತರರು ನಿಲ್ಲುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಎಲ್ಲ ಮುಗಿದ ಮೇಲೆ ನೋವುಂಡ ದಿವ್ಯಾ ಸುರೇಶ್, ಮಂಜು ಪಾವಗಡಗಿಂತಲೂ ಚಂದ್ರಚೂಡ್ ಜೊತೆಯೇ ಅರವಿಂದ್, ದಿವ್ಯಾ ಉರುಡುಗ, ಪ್ರಶಾಂತ್, ಶಮಂತ್ ಮುಂತಾದವರು ಕಾಣಿಸಿಕೊಂಡಿದ್ದು ಈ ಮಾತಿಗೆ ಇಂಬು ನೀಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.