ADVERTISEMENT

ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲು ರೆಡ್ ಕಾರ್ಡ್ ಕೊಟ್ಟು ಕಿಕ್‌ ಔಟ್ ಮಾಡಿದ ಸೇತುಪತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2026, 6:48 IST
Last Updated 5 ಜನವರಿ 2026, 6:48 IST
<div class="paragraphs"><p>ವಿಜೆ ಪಾರ್ವತಿ, ಕಮರುದ್ದೀನ್ ಹಾಗೂ ನಿರೂಪಕ, ನಟ&nbsp;ವಿಜಯ್&nbsp;ಸೇತುಪತಿ</p></div>

ವಿಜೆ ಪಾರ್ವತಿ, ಕಮರುದ್ದೀನ್ ಹಾಗೂ ನಿರೂಪಕ, ನಟ ವಿಜಯ್ ಸೇತುಪತಿ

   

ಚಿತ್ರ: ಇನ್‌ಸ್ಟಾಗ್ರಾಂ

ತಮಿಳು ಬಿಗ್‌ಬಾಸ್‌ 9ನೇ ಆವೃತ್ತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜನಪ್ರಿಯ ನಟ ವಿಜಯ್ ಸೇತುಪತಿ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬಿಗ್‌ಬಾಸ್‌ ಸೀಸನ್ 9ರಲ್ಲಿ ಇಬ್ಬರು ಸ್ಪರ್ಧಿಗಳಿಗೆ ರೆಡ್ ಕಾರ್ಡ್ ತೋರಿಸಿ ಕಿಕ್‌ ಔಟ್ ಮಾಡಿದ್ದಾರೆ.

ADVERTISEMENT

ವಿಜಯ್ ಸೇತುಪತಿ

ಶನಿವಾರದ ಸಂಚಿಕೆಯಲ್ಲಿ ತಮಿಳು ಬಿಗ್‌ಬಾಸ್‌ ನಿರೂಪಕ ವಿಜಯ್ ಸೇತುಪತಿ ಅವರು ಪಾರ್ವತಿ ಮತ್ತು ಕಮರುದ್ದೀನ್ ಇಬ್ಬರು ಸ್ಪರ್ಧಿಗಳಿಗೆ ವೇದಿಕೆ ಮೇಲೆ ರೆಡ್ ಕಾರ್ಡ್ ತೋರಿಸಿ ಎಲಿಮಿನೇಟ್ ಮಾಡಿದ್ದಾರೆ. ಇದೇ ಸಂಚಿಕೆಯ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ತಮಿಳು ಬಿಗ್‌ಬಾಸ್‌ ಆರಂಭದಿಂದಲೂ ಈ ಇಬ್ಬರು ಸ್ಪರ್ಧಿಗಳ ವರ್ತನೆ ಸರಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಸಹ ಸ್ಪರ್ಧಿಗಳ ಜೊತೆಗೆ ಅತಿರೇಕದ ಗಲಾಟೆ, ಅಸಭ್ಯ ರೀತಿಯ ವರ್ತನೆ ಬಗ್ಗೆ ವಿಜಯ್ ಸೇತುಪತಿ ಎಚ್ಚರಿಕೆ ನೀಡಿದ್ದರು. ಆದರೂ ಕ್ಯಾರೆ ಎನ್ನದೇ ಮತ್ತೆ ಜಗಳಕ್ಕೆ ಇಳಿದಿದ್ದರು. ಅಷ್ಟೇ ಅಲ್ಲದೇ ಬಿಗ್‌ಬಾಸ್‌ ಕೊಟ್ಟ ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ಸಹ ಸ್ಪರ್ಧಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಬಿಗ್‌ಬಾಸ್‌ ನಿಯಮದ ಪ್ರಕಾರ ಮನೆಯಲ್ಲಿ ಯಾರಿಗೂ ದೈಹಿಕವಾಗಿ ಹಲ್ಲೆ ಮಾಡುವಂತಿರಲಿಲ್ಲ. ಹೀಗಾಗಿ ಹಲ್ಲೆ ಮಾಡಿದ್ದಕ್ಕೆ ನಿರೂಪಕ ವಿಜಯ್ ಸೇತುಪ‍ತಿ ಅವರು ಕಮರುದ್ದೀನ್ ಹಾಗೂ ಪಾರ್ವತಿ ರೆಡ್‌ ಕಾರ್ಡ್ ತೋರಿಸಿದ್ದಾರೆ.

ಟಾಸ್ಕ್‌ ಮಧ್ಯೆ ಆಗಿದ್ದೇನು?

ಬಿಗ್‌ಬಾಸ್‌ ಕೊಟ್ಟಿದ್ದ ಟಿಕೆಟ್‌ ಟು ಫಿನಾಲೆ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಭಾಗಿಯಾಗಿರುತ್ತಾರೆ. ಒಂದೇ ಕಾರಿನಲ್ಲಿ ಎಲ್ಲರೂ ಕುಳಿತುಕೊಳ್ಳಬೇಕಾಗಿರುತ್ತದೆ. ಯಾವ ಸ್ಪರ್ಧಿ ಕಾರಿನಿಂದ ಇಳಿಯುತ್ತಾರೋ ಅವರು ಸೋತ ಹಾಗೇ ಲೆಕ್ಕ. ಹೀಗಾಗಿ ಸೈರನ್ ಆದ ಕೂಡಲೇ ಸ್ಪರ್ಧಿಗಳೆಲ್ಲ ಓಡಿ ಕಾರಿನಲ್ಲಿ ಕುಳಿತುಕೊಳ್ಳುತ್ತಾರೆ. ಅದೇ ವೇಳೆ ಸಾಂಡ್ರಾ ಎಂಬ ಸ್ಪರ್ಧಿಯನ್ನು ಕಮರುದ್ದೀನ್ ಮತ್ತು ವಿಜೆ ಪಾರ್ವತಿ ಕಾಲಿನಿಂದ ಒದ್ದು, ಕಾರಿನಿಂದ ಕೆಳಗಡೆ ತಳ್ಳುತ್ತಾರೆ. ಆ ಕೂಡಲೇ ಇತರೆ ಸ್ಪರ್ಧಿಗಳು ಹಲ್ಲೆ ಮಾಡಬೇಡಿ ಎಂದು ಎಷ್ಟೇ ಕೂಗುತ್ತಿದ್ದರೂ, ಇಬ್ಬರೂ ಅದನ್ನು ಲೆಕ್ಕಿಸದೇ ಅವಳನ್ನು ತಮ್ಮ ಕಾಲುಗಳಿಂದ ಒದ್ದು ಹೊರಗೆ ತಳ್ಳುತ್ತಾರೆ. ಪರಿಣಾಮವಾಗಿ, ಅವಳು ಕಾರಿನಿಂದ ಹೊರಗೆ ಬಿದ್ದು ಒದ್ದಾಡುತ್ತಿದ್ದರು. ನಂತರ ಅದೇ ಕಾರಿನಲ್ಲಿದ್ದ ಉಳಿದ ಸ್ಪರ್ಧಿಗಳು ಆಕೆಯ ಸಹಾಯಕ್ಕೆ ದೌಡಾಯಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ತಕ್ಷಣವೇ ಮನೆಗೆ ವೈದ್ಯರನ್ನು ಕಳಿಸುವಂತೆ ಬಿಗ್‌ಬಾಸ್‌ಗೆ ಮನವಿ ಮಾಡಿಕೊಂಡಿದ್ದಾರೆ. ಬಳಿಕ ವೈದ್ಯರ ತಂಡವು ಸಾಂಡ್ರಾಗೆ ಚಿಕಿತ್ಸೆ ನೀಡಿದೆ. ಇಷ್ಟಾದರೂ ಕಮರುದ್ದೀನ್ ಮತ್ತು ವಿಜೆ ಪಾರ್ವತಿ ಏನೂ ಆಗೇ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸಿದ್ದಾರೆ.

ಹೀಗಾಗಿ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಕಮರುದ್ದೀನ್ ಮತ್ತು ವಿಜೆ ಪಾರ್ವತಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಅಲ್ಲದೇ ಇದೇ ವಿಚಾರಕ್ಕೆ ನಿರೂಪಕ ವಿಜಯ್ ಸೇತುಪತಿ ಇಬ್ಬರ ಮೇಲೆ ಕೋಪಗೊಂಡು ಕಾರು ಟಾಸ್ಕ್‌ನಲ್ಲಿ ಅನುಚಿತವಾಗಿ ವರ್ತಿಸಿದ ಕಮರುದ್ದೀನ್ ಮತ್ತು ಪಾರ್ವತಿ ಇಬ್ಬರಿಗೂ ವೇದಿಕೆ ಮೇಲೆ ರೆಡ್ ಕಾರ್ಡ್ ನೀಡಿದ್ದಾರೆ. ಇದನ್ನು ನೋಡುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಪ್ರೇಕ್ಷಕರು ಸಂತೋಷದಿಂದ ಕುಣಿದಾಡಿದ್ದಾರೆ. ಅಷ್ಟೇ ಅಲ್ಲದೆ, ಈ ಸಂಚಿಕೆ ಪ್ರಸಾರವಾಗುತ್ತಿರುವ ವೇಳೆ ವೀಕ್ಷಕರೊಬ್ಬರು ಕೇಕ್‌ ಕಟ್‌ ಮಾಡಿ ಸಂಭ್ರಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.