
ನಟಿ ಮೌನ ಗುಡ್ಡೆಮನೆ ಹಾಗೂ ರಾಮಾಚರಿ ಧಾರಾವಾಹಿ ತಂಡ
ಚಿತ್ರ: ಇನ್ಸ್ಟಾಗ್ರಾಂ
ಕನ್ನಡ ಕಿರುತೆರೆಯಲ್ಲಿ ಪ್ರತಿ ವರ್ಷ ಹೊಸ ಧಾರಾವಾಹಿಗಳು ಮೂಡಿ ಬರುತ್ತಲೇ ಇರುತ್ತವೆ. ಆದರೆ ಕೆಲವು ಧಾರಾವಾಹಿಗಳನ್ನು ವೀಕ್ಷಕರು ಇಷ್ಟಪಡುವುದಿಲ್ಲ. ಇನ್ನೂ ಕೆಲವು ಧಾರಾವಾಹಿಗಳು ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತವೆ. ಆ ಸಾಲಿಗೆ ಸೇರುವ ರಾಮಾಚಾರಿ ಧಾರಾವಾಹಿ ಸದ್ಯ ಪ್ರದರ್ಶನ ನಿಲ್ಲಿಸಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಮಾಚಾರಿ ಧಾರಾವಾಹಿ ಮುಕ್ತಾಯಗೊಂಡಿದೆ. ಬರೋಬ್ಬರಿ 1,000 ಸಂಚಿಕೆಗಳನ್ನು ನೀಡಿದ ರಾಮಾಚಾರಿ ಧಾರಾವಾಹಿ ಇತ್ತೀಚೆಗೆ ತನ್ನ ಕಥೆಗೆ ಶುಭವಿದಾಯ ಹೇಳಿದೆ. ಖ್ಯಾತ ನಿರ್ದೇಶಕ, ನಿರ್ಮಾಪಕ ಕೆ.ಎಸ್. ರಾಮ್ಜಿ ಅವರ ಗರಡಿಯಲ್ಲಿ ಮೂಡಿ ಬಂದಿದ್ದ ರಾಮಾಚಾರಿಯಲ್ಲಿ ನಾಯಕನಾಗಿ ರಿತ್ವಿಕ್ ಕೃಪಾಕರ್ ಹಾಗೂ ನಾಯಕಿಯಾಗಿ ಮೌನ ಗುಡ್ಡೆಮನೆ ನಟಿಸಿದ್ದರು.
ತಮ್ಮ ಚೊಚ್ಚಲ ಧಾರಾವಾಹಿ ರಾಮಾಚಾರಿ ಮುಕ್ತಾಯಗೊಂಡ ಬಗ್ಗೆ ನಟಿ ಮೌನ ಗುಡ್ಡೆಮನೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಧಾರಾವಾಹಿಯ ಕೆಲವೊಂದು ವಿಡಿಯೊ ತುಣುಕುಗಳನ್ನು ಹಂಚಿಕೊಂಡು ಭಾವುಕರಾಗಿ ಬರೆದುಕೊಂಡಿದ್ದಾರೆ.
ಮೌನ ಗುಡ್ಡೆಮನೆ ಹೇಳಿದಿಷ್ಟು..
‘ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಪಾತ್ರವನ್ನು 4 ವರ್ಷಗಳ ಕಾಲ ನಿರ್ವಹಿಸುವ ಅವಕಾಶ ನನ್ನ ಜೀವನದ ಅತ್ಯಂತ ಅಮೂಲ್ಯವಾದ ಪ್ರಯಾಣವಾಗಿತ್ತು. ಇದು ಕೇವಲ ಒಂದು ಪಾತ್ರವಾಗಿರಲಿಲ್ಲ, ನನ್ನ ಬೆಳವಣಿಗೆ, ನನ್ನ ಕಲಿಕೆ ಮತ್ತು ನನ್ನ ಮನಸ್ಸಿನ ಒಂದು ಭಾಗವಾಯಿತು. ರಾಮಾಚಾರಿ ಧಾರಾವಾಹಿ ಅತ್ಯಂತ ಸುಂದರ ಅಂತ್ಯವನ್ನು ಕಂಡಿದೆ. ಈ ಪ್ರಯಾಣದ ಪ್ರತಿಕ್ಷಣಕ್ಕೂ ನಾನು ಹೃದಯ ಪೂರ್ವಕವಾಗಿ ಕೃತಜ್ಞಳಾಗಿದ್ದೇನೆ. ಚಾರುವಿಗೆ ನೀವು ನೀಡಿದ ಅಪಾರ ಪ್ರೀತಿ, ಬೆಂಬಲ ಮತ್ತು ಆಶೀರ್ವಾದವೇ ನನ್ನ ಶಕ್ತಿ. ನಮ್ಮ ತಂಡದ ಪ್ರತಿಯೊಬ್ಬರಿಗೂ, ನಿರ್ದೇಶಕರು, ಸಹನಟರು, ತಾಂತ್ರಿಕ ಬಳಗ ಮತ್ತು ವಿಶೇಷವಾಗಿ ನಮ್ಮ ವೀಕ್ಷಕರಿಗೆ ಅನಂತ ಧನ್ಯವಾದಗಳು. ಯಾವತ್ತಿಗೂ ಕೃತಜ್ಞಳು. ನಿಮ್ಮ ಪ್ರೀತಿಯ ಚಾರು’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.