ADVERTISEMENT

ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನ: ಏನಿದು ವಿವಾದ? ಯಾರಿದು ನೂಪುರ್‌ ಶರ್ಮಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜೂನ್ 2022, 11:39 IST
Last Updated 7 ಜೂನ್ 2022, 11:39 IST
ನೂಪುರ್‌ ಶರ್ಮಾ
ನೂಪುರ್‌ ಶರ್ಮಾ   

ಬೆಂಗಳೂರು: ದೆಹಲಿ ಬಿಜೆಪಿಯಲ್ಲಿ ಫೈರ್‌ ಬ್ರ್ಯಾಂಡ್‌ ಎಂದೇ ಗುರುತಿಸಿಕೊಂಡಿದ್ದ ನೂಪುರ್‌ ಶರ್ಮಾ ಅವರು ಕೆಲವು ದಿನಗಳ ಹಿಂದೆ ಟಿವಿ ಸಂವಾದವೊಂದರಲ್ಲಿ ಪ್ರವಾದಿ ಮಹಮ್ಮದ್‌ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇತ್ತೀಚೆಗೆಟೆಲಿವಿಷನ್ ಸಂವಾದದಲ್ಲಿ ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ಅವರನ್ನು ಅಮಾನತು ಮಾಡಿದ್ದು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಅವರನ್ನು ಮುಕ್ತಗೊಳಿಸಿದೆ.

ಏನಿದು ನೂಪುರ್‌ ಶರ್ಮಾ ವಿವಾದ?

ADVERTISEMENT

ಟೆ.ವಿ ಸಂವಾದದಲ್ಲಿ ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ನೂಪುರ್ ಶರ್ಮಾ ವಿರುದ್ಧ ಗುಜರಾತ್‌ ಹಾಗೂ ಮಹಾರಾಷ್ಟ್ರದ ಥಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 298, 294, 153ಎ ಮತ್ತು 505ಬಿ ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಇತರ ಅಪರಾಧಗಳ ಆರೋಪದಡಿಯಲ್ಲಿ ದೂರು ದಾಖಲಾಗಿದೆ.

ಕಳೆದ ಮೇ 27ರಂದು ಖಾಸಗಿ ಸುದ್ದಿ ವಾಹಿನಿಯಲ್ಲಿ ಜ್ಞಾನವಾಪಿ ಮಸೀದಿ ಕುರಿತಾದ ಚರ್ಚೆಯಲ್ಲಿ ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಪ್ರವಾದಿ ಮಹಮ್ಮದರ ಕುರಿತು ಅವಹೇಳನಾಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿತ್ತು.

ನೂಪುರ್‌ ಶರ್ಮಾ ಹೇಳಿಕೆ ಕುರಿತಾಗಿ ಅರಬ್ ರಾಷ್ಟ್ರಗಳು ತೀವ್ರವಾಗಿ ಖಂಡನೆ ವ್ಯಕ್ತಪಡಿಸಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಪ್ರಕಟಿಸುತ್ತಿವೆ. ಕತಾರ್ ಮತ್ತು ಕುವೈತ್‌ನ ವಿದೇಶಾಂಗ ಸಚಿವಾಲಯಗಳು ಭಾರತದ ರಾಯಭಾರಿಗಳನ್ನು ಕರೆಸಿ ಖಂಡನಾ ನಿರ್ಣಯದ ಅಧಿಕೃತ ಟಿಪ್ಪಣಿಯನ್ನು ಅವರಿಗೆ ಹಸ್ತಾಂತರಿಸಿವೆ.

ಈ ನಡುವೆ ಭಾರತದ ಉತ್ಪನ್ನಗಳನ್ನು ಖರೀದಿ ಮಾಡಬಾರದು ಎಂಬ ಅಭಿಯಾನವೂ ಅರಬ್‌ ದೇಶಗಳಲ್ಲಿ ನಡೆದಿದೆ. ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಪಕ್ಷವು,‘ನೂಪುರ್ ಅವರು ವಿವಿಧ ವಿಷಯಗಳ ಬಗ್ಗೆ ಪಕ್ಷದ ನಿಲುವಿಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಪಕ್ಷದ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಪಕ್ಷದ ಶಿಸ್ತು ಸಮಿತಿ ಹೇಳಿದ್ದು ಅವರನ್ನು ಪಕ್ಷದಿಂದ ಅಮಾನತು ಮಾಡಿ, ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಿದೆ.

ಈ ಬೆಳವಣಿಗೆಯ ನಡುವೆ ಶರ್ಮಾ ಅವರು ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಪ್ರವಾದಿ ಕುರಿತು ನೀಡಿದ್ದ ಹೇಳಿಕೆಯನ್ನು ಬೇಷರತ್ತಾಗಿ ವಾಪಸ್‌ ಪಡೆದಿದ್ದು, ಮಹಾದೇವನ (ಶಿವ) ಬಗ್ಗೆ ಅಗೌರವ ತರುವಂತಹ ಹೇಳಿಕೆ ನೀಡುತ್ತಿರುವವರ ಬಗ್ಗೆ ಖಂಡಿಸುವ ಸಂದರ್ಭದಲ್ಲಿ ಈ ಮಾತು ಆಡಿದ್ದಾಗಿ ಹೇಳಿದ್ದಾರೆ.

ಯಾರು ನೂಪುರ್‌ ಶರ್ಮಾ?

ನೂಪುರ್‌ ಶರ್ಮಾ ಅವರು ಮೂಲತಃ ದೆಹಲಿಯವರು. 1985ರಲ್ಲಿ ಜನಿಸಿದ ನೂಪುರ್‌ ಕಾನೂನು ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ವಕೀಲೆಯಾಗಿ ಕೆಲಸ ಮಾಡುತ್ತಿದ್ದು ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗೇ ಸಾಮಾಜಿಕ ಕೆಲಸಗಳ ಮೂಲಕವು ಅವರು ದೇಶದ ಗಮನ ಸೆಳೆದಿದ್ದಾರೆ.

ನೂಪುರ್‌ ಶರ್ಮಾ ಕುಟುಂಬದವರು ಅವರನ್ನು ಐಎಎಸ್‌ ಅಧಿಕಾರಿಯನ್ನಾಗಿ ಮಾಡಬೇಕು ಎಂಬ ಕನಸು ಕಂಡಿದ್ದರು. ಆದರೆ ಅವರು ವಕೀಲೆಯಾಗಿ ರಾಜಕೀಯ ಪಕ್ಷ ಸೇರಿಕೊಂಡಿದ್ದಾರೆ. ವಿಶೇಷವೆಂದರೆ ನೂಪುರ್‌ ಸಹೋದರರು ಹಾಗೂ ಸಹೋದರಿಯರು ನಾಗರೀಕ ಸೇವೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆಯುವಾಗಲೇ ಅವರು ಎಬಿವಿಪಿ (ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌) ಸೇರಿಕೊಂಡಿದ್ದರು. 2008ರಲ್ಲಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದರು. ರಾಷ್ಟ್ರೀಯವಾದಿ, ಹಿಂದೂ ಸಮಾಜದ ಉಪನ್ಯಾಸಗಳ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು.

ಕಾನೂನು ಪದವಿ ಪಡೆದ ಬಳಿಕ 2011ರಲ್ಲಿ ಲಂಡನ್‌ಗೆ ತೆರಳಿಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಮಾಸ್ಟರ್ ಆಫ್ ಲಾ ಪದವಿ ಪಡೆದರು. ನಂತರ ಭಾರತಕ್ಕೆ ಮರಳಿ ವಕೀಲೆಯಾಗಿ ವೃತ್ತಿ ಜೀವನ ಆರಂಭಿಸಿದರು. ಇದೇ ವೇಳೆ ಅವರು ಬಿಜೆಪಿಗೆ ಸೇರಿ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡರು.

ಬಿಜೆಪಿಯ ಅರವಿಂದ್ ಪ್ರಧಾನ್, ಅರುಣ್ ಜೇಟ್ಲಿ, ಅಮಿತ್ ಶಾ, ಹರ್ಷವರ್ಧನ್,ಮನೋಜ್ ತಿವಾರಿ ಸೇರಿದಂತೆ ಪ್ರಮುಖ ನಾಯಕರ ಜೊತೆಯಲ್ಲಿ ಕೆಲಸ ಮಾಡಿದರು. 2015ರಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಈಗ ಮುಖ್ಯಮಂತ್ರಿಯಾಗಿರುವ ಎಎಪಿ ಪಕ್ಷದ ಅರವಿಂದಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಲು ಅವಕಾಶ ದೊರೆಯಿತು. ಆದರೆ ಈ ಚುನಾವಣೆಯಲ್ಲಿ ಅವರು 31,000 ಮತಗಳಿಂದ ಸೋತರು.

2015ರ ಚುನಾವಣೆಯಲ್ಲಿ ಸೋತ ಬಳಿಕ ಅವರು ದೆಹಲಿ ಘಟಕದ ಬಿಜೆಪಿಯಲ್ಲಿ ವಿವಿಧ ಸ್ಥಾನಗಳನ್ನು ಪಡೆದು ಕೆಲಸ ಮಾಡಿದರು. 2020ರಲ್ಲಿ ಅವರನ್ನು ರಾಷ್ಟ್ರೀಯ ವಕ್ತಾರೆಯನ್ನಾಗಿ ಮಾಡಲಾಯಿತು. ವಿವಿಧ ಕಾರ್ಯಕ್ರಮಗಳು, ಪಕ್ಷದ ವೇದಿಕೆಗಳು, ಸಾಮಾಜಿಕ ಮಾಧ್ಯಮಗಳು ಹಾಗೂ ಟಿ.ವಿ. ಚರ್ಚೆಗಳಲ್ಲಿ ಭಾಗವಹಿಸಿ ಅವರು ಪಕ್ಷದ ಪರವಾಗಿ ಮಾತನಾಡುತ್ತಿದ್ದರು.

ಕಾನೂನಿನ ಜ್ಞಾನ, ರಾಷ್ಟ್ರೀಯ ವಿಷಯಗಳ ಅರಿವು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳ ಮೇಲಿನ ಹಿಡಿತದ ಕಾರಣ ಅವರಿಗೆ ಬಿಜೆಪಿಯಲ್ಲಿ ಹೆಚ್ಚಿನ ಅವಕಾಶಗಳು ದೊರೆತವು. ಅವರು ಹಲವಾರು ಸಲ ವಿವಾದಗಳಿಗೆ ಗುರಿಯಾಗಿದ್ದರು.

ಪ್ರವಾದಿ ಮಹಮ್ಮದರ ಕುರಿತಾದ ಹೇಳಿಕೆ ವಿಚಾರದಲ್ಲಿ ನೂಪುರ್ ಶರ್ಮಾ ಅವರಿಗೆ ಜೀವ ಬೆದರಿಕೆ ಎದುರಾಗಿದೆ. ಸದ್ಯ ನೂಪುರ್‌ಶರ್ಮಾ ಹಾಗೂ ಅವರ ಕುಟುಂಬಕ್ಕೆ ದೆಹಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.