ADVERTISEMENT

ಕಣ್ಣಿನ ಪೊರೆ ಚಿಕಿತ್ಸೆ ನಂತರ ಮನೆಯಲ್ಲೇ ಆರೈಕೆ ಹೇಗೆ?

ಡಾ.ರಾಜಶೇಖರ್ ವೈ.ಎಲ್.
Published 7 ಅಕ್ಟೋಬರ್ 2020, 19:30 IST
Last Updated 7 ಅಕ್ಟೋಬರ್ 2020, 19:30 IST
ನೇತ್ರ ತಪಾಸಣೆ
ನೇತ್ರ ತಪಾಸಣೆ    
""

ಕಣ್ಣಿನ ಪೊರೆ ಎಂಬುದು ವಯಸ್ಸಾದವರಲ್ಲಿ ಸಾಮಾನ್ಯ ಸಮಸ್ಯೆ. ಸೂಕ್ತ ಸಮಯದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿ ಪೊರೆ ತೆಗೆದು ಹಾಕದಿದ್ದರೆ ಇದು ಅಂಧತ್ವಕ್ಕೆ ಕಾರಣವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಪ್ರಕಾರ ಕಣ್ಣಿನ ಪೊರೆ ಈಗಾಗಲೇ ವಿಶ್ವದ ಬಹುಪಾಲು ಕುರುಡುತನಕ್ಕೆ ಹಾಗೂ ಭಾರತದಲ್ಲಿ ಶೇ 51 ಕ್ಕಿಂತ ಹೆಚ್ಚು ಅಂಧತ್ವಕ್ಕೆ ಕಾರಣ. ಭಾರತದಲ್ಲಿ ಪ್ರತಿವರ್ಷ 20 ಲಕ್ಷ ಹೊಸ ಕಣ್ಣಿನ ಪೊರೆ ಪ್ರಕರಣಗಳು ದಾಖಲಾಗುತ್ತಿವೆ.

ಡಾ.ರಾಜಶೇಖರ್ ವೈ.ಎಲ್.

ಶಸ್ತ್ರಚಿಕಿತ್ಸೆ ವಿಳಂಬವಾದರೆ ಏನು ಸಮಸ್ಯೆ?

ಪೊರೆ ತೆಗೆದು ಹಾಕಲು ವಿಳಂಬವಾದರೆ ಶಸ್ತ್ರಚಿಕಿತ್ಸೆ ಹೆಚ್ಚು ಕಷ್ಟಕರಕ, ದೃಷ್ಟಿಯನ್ನು ಪುನಃ ಪಡೆಯುವ ಸಾಧ್ಯತೆ ಕಡಿಮೆ.ಕಣ್ಣಿನ ಪೊರೆ ಬಲಿತರೆ ಅದು ಲೆನ್ಸ್ ಪ್ರೇರಿತ ಗ್ಲಾಕೋಮಾ ಅಥವಾ ಕಣ್ಣುಗಳೊಳಗಿನ ಮಸೂರ ಸ್ಥಳಾಂತರಗೊಳ್ಳಲು ಕಾರಣವಾಗಬಹುದು. ಇದರಿಂದ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.

ADVERTISEMENT

ಕಣ್ಣಿನ ಪೊರೆಯಿಂದ ದೃಷ್ಟಿ ಮಸುಕಾಗಿರಬಹುದು ಎಂದು ನಂಬಿದ ಹಲವರಲ್ಲಿ ಬೇರೆ ಕೆಲವು ಸಮಸ್ಯೆಗಳು ಇರಬಹುದು. ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್, ಡಯಾಬಿಟಿಕ್ ರೆಟಿನೋಪತಿ ಮತ್ತು ಕೊನೆಯ ಹಂತಕ್ಕೆ ತಲುಪಿದ ಗ್ಲಾಕೋಮಾ ಆಗಿರಬಹುದು.

ಕೋವಿಡ್-19 ಸಂದರ್ಭದಲ್ಲಿ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ಶಸ್ತ್ರಚಿಕಿತ್ಸೆ ಮಾಡುವಂತಹ ಆಸ್ಪತ್ರೆಗಳಿಗೆ ಭೇಟಿ ನೀಡಿ ಈ ಪೊರೆ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದು.

ಶಸ್ತ್ರಚಿಕಿತ್ಸೆಯ ನಂತರದ ಆರೈಕೆ ಹೇಗೆ?

ಒಂದು ವೇಳೆ ನೀವು ಇತ್ತೀಚೆಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ನಂತರ ವೈದ್ಯರನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೆ ಮನೆಯಲ್ಲೇ ಕೆಲವು ಕ್ರಮಗಳನ್ನು ಅನುಸರಿಸಬಹುದು.

* ಕೆಲವು ವಾರಗಳ ಕಾಲ ವಾಹನ ಚಲಾಯಿಸುವುದನ್ನು ತಪ್ಪಿಸಿ.

* ಭಾರವಾದ ವಸ್ತುಗಳನ್ನು ಎತ್ತುವ ಅಥವಾ ಶ್ರಮದಾಯಕ ಚಟುವಟಿಕೆ ಮಾಡಬೇಡಿ.

* ಶಸ್ತ್ರಚಿಕಿತ್ಸೆಯ ನಂತರ ತಕ್ಷಣವೇ ಬಾಗಬೇಡಿ. ಏಕೆಂದರೆ ಅದು ಕಣ್ಣುಗಳ ಮೇಲೆ ಹೆಚ್ಚುವರಿ ಒತ್ತಡ ಬೀರುತ್ತದೆ.

* ಶಸ್ತ್ರಚಿಕಿತ್ಸೆಯಾದ ನಂತರ ಸೀನುವುದನ್ನು ಅಥವಾ ವಾಂತಿ ಮಾಡುವುದನ್ನು ತಡೆದುಕೊಳ್ಳಿ.

* ಕೆಲವು ವಾರಗಳ ಕಾಲ ಸ್ನಾನಕ್ಕಾಗಿ ಟಬ್ ಬಳಸಬೇಡಿ. ಏಕೆಂದರೆ ಇದು ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

* ಮೊದಲ ಕೆಲವು ವಾರಗಳಲ್ಲಿ ಧೂಳು ಮತ್ತು ಗಾಳಿಗೆ ಕಣ್ಣುಗಳನ್ನು ಒಡ್ಡಬೇಡಿ.

ಶಸ್ತ್ರಚಿಕಿತ್ಸೆಯ ನಂತರ ನಿಮ್ಮ ಕಣ್ಣುಗಳನ್ನು ಉಜ್ಜಬೇಡಿ. ಕೋವಿಡ್ -19 ವೈರಸ್ ಅನ್ನು ತಡೆಗಟ್ಟಲು ಇದು ಮುಖ್ಯ.

ಶಸ್ತ್ರಚಿಕಿತ್ಸೆಯ ನಂತರ ಕಂಪ್ಯೂಟರ್ ಕೆಲಸ, ಲಘು ಟಿವಿ ವೀಕ್ಷಣೆ, ಸ್ನಾನ ಮೊದಲಾದವುಗಳನ್ನು ಮಾಡಬಹುದು. ಈ ಸಾಂಕ್ರಾಮಿಕ ಬಿಕ್ಕಟ್ಟಿನಲ್ಲಿ ವೈದ್ಯರ ಸೂಚನೆಗಳನ್ನು ಅನುಸರಿಸಿ ಮನೆಯಲ್ಲಿ ಸ್ವ-ಆರೈಕೆಯತ್ತ ಗಮನಹರಿಸುವುದು ಸೂಕ್ತ.

(ಲೇಖಕ: ಸೀನಿಯರ್‌ ನೇತ್ರತಜ್ಞ ಮತ್ತು ವೈದ್ಯಕೀಯ ನಿರ್ದೇಶಕ, ಶೇಖರ್‌ ಕಣ್ಣಿನ ಆಸ್ಪತ್ರೆ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.