
ಎಐ ಚಿತ್ರ
ಅರಣ್ಯ ಸಂಪತ್ತಿನಿಂದ ಸಮೃದ್ದವಾಗಿರುವ ಕರ್ನಾಟಕದಲ್ಲಿ ಹಲವು ಗಿರಿಧಾಮಗಳಿವೆ. ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳಗಳು ಇಲ್ಲಿ ಕಾಣಸಿಗುತ್ತವೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪ್ರಕಾರ, ಕರ್ನಾಟಕದ 5 ಗಿರಿ ಶಿಖರಗಳು ಯಾವುವು? ಅಲ್ಲಿಗೆ ತಲುಪುವುದು ಹೇಗೆ ಎಂಬುದನ್ನು ತಿಳಿಯೋಣ.
1,930 ಮೀ ಎತ್ತರವಿರುವ ಮುಳ್ಳಯ್ಯನಗಿರಿ ಚಿಕ್ಕಮಗಳೂರಿನ ‘ಚಂದ್ರ ದ್ರೋಣ’ ಬೆಟ್ಟದ ಶ್ರೇಣಿಯಲ್ಲಿದೆ. ಕರ್ನಾಟಕದ ಅತಿ ಎತ್ತರದ ಶಿಖರವಾಗಿರುವ ಮುಳ್ಳಯ್ಯನಗಿರಿ ಸದಾ ಹಸಿರಿನಿಂದ ಕೂಡಿದ ಬೆಟ್ಟವಾಗಿದೆ. ಈ ಬೆಟ್ಟ ಚಾರಣಿಗರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿ 3 ಕಿಮೀ ಚಾರಣ ಮಾಡಬಹುದು.
ತಲುಪುವುದು ಹೇಗೆ: ಬೆಂಗಳೂರಿನಿಂದ 300 ಕಿಮೀ, ಮಂಗಳೂರಿನಿಂದ 150 ಕಿಮೀ ದೂರದಲ್ಲಿದೆ. ಚಿಕ್ಕಮಗಳೂರಿಗೆ ರೈಲು ಅಥವಾ ಬಸ್ ಮೂಲಕ ತಲುಪಬಹುದು. ಅಲ್ಲಿಂದ ಬಾಡಿಗೆ ಟ್ಯಾಕ್ಸಿ, ಸ್ವಂತ ವಾಹನಗಳಿಂದ ಮುಳ್ಳಯ್ಯನಗಿರಿಗೆ ತಲುಪಬಹುದು.
ಭೇಟಿ ನೀಡಲು ಸೂಕ್ತ ಸಮಯ: ಮಳೆಗಾಲದ ನಂತರ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಚಾರಣಿಗರು ಮಳೆಗಾಲದಲ್ಲೂ ಭೇಟಿ ನೀಡಬಹುದು.
ಪ್ರಜಾವಾಣಿ ಚಿತ್ರ
ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರ ಕುದುರೆಮುಖವಾಗಿದೆ. 1,894 ಮೀ ಎತ್ತರವಿರುವ ಕುದುರೆಮುಖ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಇದರ ಹೆಸರೆ ಹೇಳುವಂತೆ ಶಿಖರವು ಕುದುರೆಯ ಮುಖದ ಆಕಾರವಿದೆ. ಆ ಕಾರಂದಿಂದಲೇ ಕುದುರೆ ಮುಖ ಎಂಬ ಹೆಸರಿದೆ. ಇಲ್ಲಿನ ಪ್ರಕೃತಿ, ವನ್ಯಜೀವಿಗಳು, ಹಸಿರಿನಿಂದ ತುಂಬಿದ ಶ್ರೇಣಿಗಳು ಚಾರಣಿಗರಿಗೆ ಒಳ್ಳೆಯ ಅನುಭವ ನೀಡುತ್ತವೆ.
ಕುದುರೆಮುಖದಲ್ಲಿ 22 ಕಿಮೀ ಚಾರಣ ಮಾಡಬಹುದು. ಚಾರಣ ಮಾಡಲು ಪ್ರತಿ ವ್ಯಕ್ತಿಗೆ ₹600 ಶುಲ್ಕವಿದೆ.
ತಲುಪುವುದು ಹೇಗೆ: ಚಿಕ್ಕಮಗಳೂರಿನಲ್ಲಿರುವ ಕುದುರೆಮುಖ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 100 ಕಿಮೀ ದೂರದಲ್ಲಿದೆ. ಕುದುರೆಮುಖಕ್ಕೆ ಟ್ಯಾಕ್ಸಿಯ ಮೂಲಕ ತಲುಪಬಹುದು.
ಭೇಟಿ ನೀಡಲು ಉತ್ತಮ ಸಮಯ: ಈ ಪ್ರದೇಶ ಹೆಚ್ಚು ತಂಪಾಗಿರುವ ಕಾರಣ ವರ್ಷವಿಡೀ ಭೇಟಿ ನೀಡಬಹುದು. ಮಾರ್ಚ್ನಿಂದ ಅಕ್ಟೋಬರ್ ವರೆಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
ಪ್ರಜಾವಾಣಿ ಚಿತ್ರ
ಕೊಡಗಿನ ಅತಿ ಎತ್ತರದ ಶಿಖರ ಎಂಬ ಖ್ಯಾತಿಯನ್ನು ತಡಿಯಾಂಡಮೋಲ್ ಪರ್ವತ ಪಡೆದಿದೆ. ಅತ್ಯಂತ ಕಠಿಣವಾದ ಚಾರಣಗಳಲ್ಲಿ ಒಂದಾಗಿದೆ. 1,748 ಮೀ ಎತ್ತರದ ತಡಿಯಾಂಡಮೋಲ್ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದಲ್ಲಿದೆ. ಈ ಪರ್ವತವನ್ನು ಅತ್ಯಂತ ಕಠಿಣವಾದ ಚಾರಣ ಸ್ಥಳವೆಂದು ಗುರುತಿಸಲಾಗಿದೆ.
ಇಲ್ಲಿ ಸುಮಾರು 6 ಕಿಮೀ ಚಾರಣ ಮಾಡಬಹುದು. ಚಾರಣದ ಹಾದಿಯಲ್ಲಿ ಮಂಜು ಮುಸುಕಿದ ಬೆಟ್ಟಗಳು,ಜಲಪಾತ ಮತ್ತು ತೊರೆಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ.
ತಲುಪುವುದು ಹೇಗೆ: ಬೆಂಗಳೂರು 250 ಕಿಮೀ ದೂರದಲ್ಲಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 138 ಕಿಮೀ ದೂರದಲ್ಲಿದೆ. ಮೈಸೂರಿನ ಮೂಲಕವೂ ಸಹ ಇಲ್ಲಿಗೆ ತಲುಪಬಹುದು. ಮೈಸೂರು, ಬೆಂಗಳೂರು ಮತ್ತು ಮಂಗಳೂರಿನಿಂದ ನೀವು ಸಾರ್ವಜನಿಕ ಸಾರಿಗೆ ಮತ್ತು ಕ್ಯಾಬ್ ಮೂಲಕ ಸಹ ಕೊಡಗು ತಲುಪಬಹುದು.
ಭೇಟಿ ನೀಡಲು ಸೂಕ್ತ ಸಮಯ: ಸೆಪ್ಟೆಂಬರ್ನಿಂದ ಮಾರ್ಚ್ ವರೆಗೆ ಭೇಟಿ ನೀಡುವುದು ಉತ್ತಮವಾಗಿದೆ.
ಪ್ರಜಾವಾಣಿ ಚಿತ್ರ
ಕೊಡಗು ಜಿಲ್ಲೆಯಲ್ಲಿರುವ ಕುಮಾರ ಪರ್ವತವು 1,712 ಮೀಟರ್ ಎತ್ತರವಿದೆ. ಇದು ರಾಜ್ಯದ ನಾಲ್ಕನೇ ಅತಿ ಎತ್ತರದ ಶಿಖರವಾಗಿದೆ. ಇಲ್ಲಿನ ಕಡಿದಾದ ಹಾದಿ, ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟಗಳು ಚಾರಣಿಗರಿಗೆ ಸ್ಮರಣೀಯ ಅನುಭವ ನೀಡುತ್ತವೆ.
ಈ ಚಾರಣ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ಸಮೀಪದಲ್ಲಿದೆ. ಚಾರಣಿಗರ ಸ್ವರ್ಗ ಎಂತಲೇ ಕುಮರ ಪರ್ವತವನ್ನು ಕರೆಯಲಾಗುತ್ತದೆ. 22 ಕಿಮೀ ಚಾರಣ ಮಾಡಬಹುದು. ಚಾರಣ ಮಾಡಲು ಅನುಮತಿ ಪಡೆಯಬೇಕು. ಚಾರಣಕ್ಕೆ ನಿಗದಿತ ಶುಲ್ಕವನ್ನು ವಿಧಿಸಲಾಗುತ್ತದೆ.
ತಲುಪುವುದು ಹೇಗೆ: ಈ ಚಾರಣವು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಪ್ರಾರಂಭವಾಗುತ್ತದೆ ಮತ್ತು ಸುಲಭವಾಗಿ ತಲುಪಬಹುದು. ಸಾರಿಗೆ ವಾಹನದ ವ್ಯವಸ್ಥೆ ಇದೆ.
ಭೇಟಿಗೆ ಉತ್ತಮ ಸಮಯ: ಮಳೆಗಾಲದ ನಂತರದ ಅವಧಿ ಅಥವಾ ಮಾರ್ಚ್ ನಿಂದ ಅಕ್ಟೋಬರ್ ಸೂಕ್ತವಾಗಿದೆ.
ಪ್ರಜಾವಾಣಿ ಚಿತ್ರ
ಕೇರಳ ಮತ್ತು ಕರ್ನಾಟಕ ಎರೆಡೂ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿದ ಪರ್ವತವಾಗಿದೆ. ಬ್ರಹ್ಮಗಿರಿ ಬೆಟ್ಟವು ಒಂದು ಕಡೆಯಿಂದ ವಯನಾಡ್ ಇನ್ನೊಂದು ಕಡೆಯಿಂದ ಕೂರ್ಗ್ದಿಂದ ಹತ್ತಬಹುದು. 1,608 ಮೀ ಎತ್ತರವಿದೆ.
ಇಲ್ಲಿ ಸುಮಾರು 3 ರಿಂದ 4 ಕಿಮೀ ಚಾರಣ ಮಾಡಬಹುದಾಗಿದೆ. ಸುಲಭವಾಗಿ ಚಾರಣ ಮಾಡಬಹುದಾದ ಪರ್ವತವಾಗಿದೆ. ಚಾರಣದ ದಾರಿಯಲ್ಲಿ ತಿರುನೆಲ್ಲಿ ದೇವಸ್ಥಾನ, ಮುನಿಕಲ್ ಗುಹೆಗಳು ಮತ್ತು ಇರುಪ್ಪು ಜಲಪಾತಗಳು ಚಾರಣದ ಪ್ರಮುಖ ಆಕರ್ಷಣೆಗಳಾಗಿವೆ.
ತಲುಪುವುದು ಹೇಗೆ: ಮಂಗಳೂರು, ಬೆಂಗಳೂರು ಮತ್ತು ಮೈಸೂರಿನಿಂದ ಸುಲಭವಾಗಿ ರಸ್ತೆ ಸಾರಿಗೆಯ ಮೂಲಕ ತಲುಪಬಹುದು. ಕೊಡಗಿನಿಂದ ಬ್ರಹ್ಮಗಿರಿಯನ್ನು ಸುಲಭವಾಗಿ ತಲುಪಬಹುದು. ಸಾರ್ವಜನಿಕ ಮತ್ತು ಖಾಸಗಿ ಸಾರಿಗೆಯ ಮೂಲಕ ತಲುಪಬಹುದು.
ಭೇಟಿ ನೀಡಲು ಉತ್ತಮ ಸಮಯ : ಅಕ್ಟೋಬರ್ನಿಂದ ಮಾರ್ಚ್ ನಡುವೆ
ಪ್ರಜಾವಾಣಿ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.