ರೈತ ನಾಯಕ ರಾಕೇಶ್ ಟಿಕಾಯತ್ ಅವರ ನಿಜಬಣ್ಣ ಬಯಲಾಗಿದೆ. ಅವರು ಮಾಧ್ಯಮ ಸಂಸ್ಥೆಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಜೀನ್ಯೂಸ್ ನಿರೂಪಕ ಸುಧೀರ್ ಚೌಧರಿ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ನಲ್ಲಿ ವಿಡಿಯೊ ಒಂದನ್ನೂ ಸುಧೀರ್ ಹಂಚಿಕೊಂಡಿದ್ದಾರೆ. ‘ಮಾಧ್ಯಮ ಸಂಸ್ಥೆಗಳು ರೈತರನ್ನು ಬೆಂಬಲಿಸಬೇಕು. ಇಲ್ಲದಿದ್ದರೆ ನಿಮ್ಮ ಕತೆಯೂ ಮುಗಿದ ಹಾಗೆ’ ಎಂದು ಟಿಕಾಯತ್ ಅವರು ಹೇಳುತ್ತಿರುವ ದೃಶ್ಯವಿದೆ. ಈ ವಿಡಿಯೊ ಮತ್ತು ಟ್ವೀಟ್ ಅನ್ನು 1 ಲಕ್ಷಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ. ಹಲವರು ಟಿಕಾಯತ್ ಅವರ ವಿರುದ್ಧ ಕಿಡಿ ಕಾರಿದ್ದಾರೆ. ಅವರಿಗೆ ಮಾಧ್ಯಮಗಳು ಬೆಂಬಲ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಇದು ತಿರುಚಲಾದ ವಿಡಿಯೊ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ಚೆಕ್ ಪ್ರಕಟಿಸಿದೆ. ಸುಧೀರ್ ಚೌಧರಿ ಹಂಚಿಕೊಂಡಿರುವ ವಿಡಿಯೊ ಪೂರ್ಣವಲ್ಲ. ಪೂರ್ಣ ವಿಡಿಯೊ 43 ಸೆಕೆಂಡ್ಗಳಷ್ಟು ದೀರ್ಘವಾಗಿದೆ. ಅದರಲ್ಲಿ ಟಿಕಾಯತ್ ಅವರು, ‘ಈ ಸರ್ಕಾರವು ನೂತನ ಕೃಷಿ ಕಾಯ್ದೆಗಳನ್ನು ತರುವ ಮೂಲಕ ಅರ್ಧ ದೇಶವನ್ನು ಮಾರಾಟ ಮಾಡಿದೆ. ಹೀಗಾಗಿ ನಾವು ಅವರ ವಿರುದ್ಧ ಹೋರಾಡುತ್ತಿದ್ದೇವೆ. ಕೇಂದ್ರ ಸರ್ಕಾರದ ಮುಂದಿನ ಗುರಿ ಮಾಧ್ಯಮ ಸಂಸ್ಥೆಗಳು. ನೀವು ಈಗ ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು. ಇಲ್ಲದಿದ್ದಲ್ಲಿ ನಿಮ್ಮ ಕತೆಯೂ ಮುಗಿಯುತ್ತದೆ’ ಎಂದು ಹೇಳಿದ್ದಾರೆ. ಈ ಹೇಳಿಕೆಯಲ್ಲಿ ಕೊನೆಯ ಎರಡು ವಾಕ್ಯಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು, ತಪ್ಪು ಅರ್ಥ ಬರುವ ರೀತಿಯಲ್ಲಿ ವಿಡಿಯೊವನ್ನು ತಿರುಚಲಾಗಿದೆ ಎಂದು ದಿ ಲಾಜಿಕಲ್ ಇಂಡಿಯನ್ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.