ಮಿರ್ಜಾಪುರ (ಉತ್ತರ ಪ್ರದೇಶ): ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಅವರ ಕೌಟುಂಬಿಕ ಸಮಸ್ಯೆ ನಿವಾರಣೆಯಾಗಲಿ ಎಂದು ಪ್ರಾರ್ಥಿಸಿ ಇಲ್ಲಿನ ಮಾ ವಿಂಧ್ಯಾವಾಸಿನಿ ದೇವಿ ದೇವಾಲಯದಲ್ಲಿ 11 ದಿನಗಳ ಪೂಜೆನಡೆಸಲಾಗಿದೆ.
ಈ ದೇವಿಯ ಬಗ್ಗೆ ಲಾಲು ಪ್ರಸಾದ್ ಅವರ ಕುಟುಂಬ ಅಪಾರ ನಂಬಿಕೆ ಹೊಂದಿದೆ, ಬಿಹಾರ ಗಡಿಯಲ್ಲಿರುವ ಉತ್ತರ ಪ್ರದೇಶದ
ದೇಗುಲಕ್ಕೆ ಕುಟುಂಬದವರು ಆಗಾಗ ಭೇಟಿ ನೀಡುತ್ತಿರುತ್ತಾರೆ ಎಂದು ಇಲ್ಲಿನ ಅರ್ಚಕರು ತಿಳಿಸಿದ್ದಾರೆ.
‘ಲಾಲು ಕುಟುಂಬದ ಸಮಸ್ಯೆಗಳು ನಿವಾರಣೆಯಾಗಲಿ ಎಂದು ‘ಹವನ ಪೂಜೆ’ಯನ್ನು ನಡೆಸಲಾಗಿದೆ. ಇದರಿಂದ ಗೃಹ ನಕ್ಷತ್ರವನ್ನು ತೃಪ್ತಿಪಡಿಸಿ, ಇಡೀ ಕುಟುಂಬದಲ್ಲಿ ಶಾಂತಿ ನೆಲೆಸುವಂತೆ ಮಾಡಬಹುದು’ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ತಾವು ಹರಿದ್ವಾರದಲ್ಲಿದ್ದು, ತಮ್ಮ ವಿಚ್ಛೇದನ ನಿರ್ಧಾರಕ್ಕೆ ಕುಟುಂಬದವರು ಒಪ್ಪಿಗೆ ನೀಡುವವರೆಗೂ ಮನೆಗೆ ವಾಪಸಾಗುವುದಿಲ್ಲ ಎಂದು ತೇಜ್ ಪ್ರತಾಪ್ ಟಿ.ವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶುಕ್ರವಾರ ಹೇಳಿದ್ದಾರೆ.
‘ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ಸರಿಪಡಿಸಲಾಗದಂತಹವು. ವಿವಾಹ ವಿಧಿ ವಿಧಾನ ಆರಂಭಕ್ಕೆ ಮುನ್ನವೇ ನಾನಿದನ್ನು ನನ್ನ ತಂದೆ ತಾಯಿಗೆ ಹೇಳಿದ್ದೆ. ಆದರೆ ಯಾರೂ ನನ್ನ ಮಾತನ್ನು ಆಗಲೂ ಕೇಳಲಿಲ್ಲ, ಈಗಲೂ ಕೇಳುತ್ತಿಲ್ಲ’
ಎಂದಿದ್ದಾರೆ.
ಆರ್ಜೆಡಿ ಶಾಸಕರಾದ ಚಂದ್ರಿಕಾ ರಾಯ್ ಅವರ ಪುತ್ರಿ ಐಶ್ವರ್ಯಾ ರಾಯ್ ಅವರೊಂದಿಗೆ ತೇಜ್ ಪ್ರತಾಪ್ ವಿವಾಹ ಕಳೆದ ಮೇ 12ರಂದು ನೆರವೇರಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.