ADVERTISEMENT

ಕೋಮುವಾದಿ ಭಾಷಣ ಆರೋಪ:ಸಿಎಎ ವಿರೋಧಿ ಪ್ರತಿಭಟನಾಕಾರರತ್ತ ಗುಂಡು ಹಾರಿಸಿದ್ದವನ ಸೆರೆ

ಪಿಟಿಐ
Published 13 ಜುಲೈ 2021, 6:41 IST
Last Updated 13 ಜುಲೈ 2021, 6:41 IST
ಆರೋಪಿ ಕಪಿಲ್‌ ಗುಜ್ಜಾರ್‌ನ ಸಾಂದರ್ಭಿಕ ಚಿತ್ರ
ಆರೋಪಿ ಕಪಿಲ್‌ ಗುಜ್ಜಾರ್‌ನ ಸಾಂದರ್ಭಿಕ ಚಿತ್ರ   

ಗುರುಗ್ರಾಮ: ಕಳೆದ ವರ್ಷ ದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭ ಸಾರ್ವಜನಿಕವಾಗಿ ಪಿಸ್ತೂಲ್‌ ತೋರಿಸಿ, ಪ್ರತಿಭಟನಾಕಾರರತ್ತ ಗುಂಡು ಹಾರಿಸಿದ್ದ 19 ವರ್ಷದ ಯುವಕನನ್ನು ಸೋಮವಾರ ಕೋಮುವಾದಿ ಭಾಷಣ ಮಾಡಿದ ಆರೋಪದಡಿ ಹರಿಯಾಣ ಪೊಲೀಸರು ಬಂಧಿಸಿದ್ದಾರೆ.

ಗುರುಗ್ರಾಮದ ಪಟೌಡಿಯಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಎರಡು ಧಾರ್ಮಿಕ ಸಮುದಾಯಗಳ ನಡುವೆ ದ್ವೇಷ ಬಿತ್ತುವ, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಮಾತುಗಳನ್ನು ಆಡಿದ ಆರೋಪ ಕಪಿಲ್‌ ಗುಜ್ಜಾರ್‌ ಮೇಲಿದೆ.

ಪಟೌಡಿಯಲ್ಲಿ ಇತ್ತೀಚೆಗೆ ನಡೆದ ಮಹಾಪಂಚಾಯತ್‌ನಲ್ಲಿ ಕೋಮುವಾದಿ ಭಾಷಣ ಮಾಡಿದ್ದಕ್ಕಾಗಿ ಯುವಕನನ್ನು ಬಂಧಿಸಲಾಗಿದ್ದು, ನ್ಯಾಯಾಂಗದ ವಶಕ್ಕೆ ನೀಡಲಾಗಿದೆ. ಬಂಧಿತ ಆರೋಪಿ 2020ರಲ್ಲಿ ಜಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದ ಯುವಕ ಎಂದು ಪಿಟಿಐಗೆ ಮನೆಸರ್‌ನ ಸಹಾಯಕ ಕಮಿಷನರ್‌ ವರುಣ್‌ ಸಿಂಗ್ಲಾ ಸ್ಪಷ್ಟ ಪಡಿಸಿದ್ದಾರೆ.

ADVERTISEMENT

ಪಟೌಡಿ ಮಹಾಪಂಚಾಯತ್‌ನಲ್ಲಿ ಹರಿಯಾಣದ ಬಿಜೆಪಿ ವಕ್ತಾರ ಮತ್ತು ಕರ್ಣಿ ಸೇನೆಯ ಅಧ್ಯಕ್ಷ ಸೂರಜ್‌ ಪಾಲ್‌ ಅಮು ಭಾಗವಹಿಸಿದ್ದರು. ಯುವಕನ ಮೇಲೆ ಐಪಿಸಿ ಸೆಕ್ಷನ್‌ 153 ಎ ಮತ್ತು 295 ಎ ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.