ADVERTISEMENT

ದೆಹಲಿಯಲ್ಲಿ ಗ್ಯಾಂಗ್‌ ವಾರ್‌: ಶೂಟೌಟ್‌ನಲ್ಲಿ ಇಬ್ಬರ ಸಾವು 

ಏಜೆನ್ಸೀಸ್
Published 20 ಮೇ 2019, 4:16 IST
Last Updated 20 ಮೇ 2019, 4:16 IST
   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ ಎರಡು ರೌಡಿ ಗುಂಪುಗಳ ನಡುವೆ ನಡು ರಸ್ತೆಯಲ್ಲೇ ಕಾಳಗ ನಡೆದಿದೆ. ಇದರಲ್ಲಿ ಇಬ್ಬರು ಗುಂಡೇಟಿಗೆ ಬಲಿಯಾಗಿದ್ದಾರೆ.

ನೈರುತ್ಯ ದೆಹಲಿಯ ದ್ವಾರಕಾ ಮೋರ್‌ ಮೆಟ್ರೋ ನಿಲ್ದಾಣದ ಬಳಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ನವಾಡದ ಪ್ರವೀಣ್‌ ಗೆಹ್ಲೋಟ್‌, ವಿಕಾಸ್‌ ದಲಾಲ್‌ ಎಂಬುವವರು ಶೌಟೌಟ್‌ಗೆ ಬಲಿಯಾಗಿದ್ಧಾರೆ. ಈ ಇಬ್ಬರ ಮೇಲೂ ದೆಹಲಿ ಮತ್ತು ಹರಿಯಾಣದ ಪೊಲೀಸ್‌ ಠಾಣೆಗಳಲ್ಲಿ ಕೊಲೆ, ಸುಲಿಗೆ, ಕಳ್ಳತನದ ಹಲವು ಕೇಸ್‌ಗಳು ಇದ್ದವು. ಈ ಪೈಕಿ ದಲಾಲ್‌ 2018ರಲ್ಲಿ ಪೊಲೀಸ್‌ ಠಾಣೆಯಿಂದ ತಪ್ಪಿಸಿಕೊಂಡಿದ್ದ.

ದ್ವಾರಕಾ ಮೋರ್‌ ಮೆಟ್ರೋ ಸ್ಟೇಷನ್‌ ಬಳಿ ಭಾನುವಾರ ಸಂಜೆ 4ರ ಸುಮಾರಿನಲ್ಲಿ ಪ್ರವೀಣ್‌ ಗೆಹ್ಲೋಟ್‌ ತನ್ನ ಸಹಚರರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಇದೇ ವೇಳೆ ಮತ್ತೊಂದು ಕಾರಿನಲ್ಲಿ ಬಂದ ಗುಂಪು ಪ್ರವೀಣ್‌ ಇದ್ದ ಕಾರನ್ನು ಅಡ್ಡಗಟ್ಟಿತು. ಕಾರಿನಿಂದ ಇಳಿದ ಗುಂಪು ಪ್ರವೀಣ್‌ ಮೇಲೆ 15 ಸುತ್ತಿನ ಗುಂಡಿನ ದಾಳಿ ನಡೆಸಿದೆ. ಹೀಗಾಗಿ ಪ್ರವೀಣ್‌ ಕಾರಿನಲ್ಲಿಯೇ ಸಾವಿಗೀಡಾಗಿದ್ದಾನೆ. ಘಟನೆ ಕಂಡ ನಾಗರಿಕರುಭಯಭೀತರಾದರು.

ADVERTISEMENT

ಅಲ್ಲೇ ಪಕ್ಕದಲ್ಲೇ ಇದ್ದ ಪೊಲೀಸರು, ದಾಳಿ ನಡೆಸುತ್ತಿದ್ದ ಗುಂಪಿನ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದರು. ಈ ವೇಳೆ ದುಷ್ಕರ್ಮಿಯೊಬ್ಬ ಮೃತಪಟ್ಟಿದ್ದಾನೆ. ಆದರೆ, ಮಿಕ್ಕವರು ಪಲಾಯನಗೊಂಡಿದ್ದಾರೆ. ದುಷ್ಕರ್ಮಿಗಳ ಮಾಹಿತಿ ಲಭ್ಯವಾಗಿದ್ದು, ಅವರನ್ನು ಬಂಧಿಸುವ ಕಾರ್ಯಾಚರಣೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರೌಡಿ ಗುಂಪುಗಳ ಈ ಘರ್ಷಣೆಗೆ ಆಸ್ತಿ ವಿವಾದ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.