ನರೇಂದ್ರ ಮೋದಿ ಪ್ರಯಾಣದ ಸಮಯದಲ್ಲಿ ಸಂಭವಿಸಿದ್ದ ಭದ್ರತಾ ಲೋಪದ ವೇಳೆ ಜಮಾಯಿಸಿದ್ದ ಅಧಿಕಾರಿಗಳು
ನವದೆಹಲಿ: 2022ರ ಜನವರಿಯಲ್ಲಿ ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಯಾಣದ ವೇಳೆ ಸಂಭವಿಸಿದ್ದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ 25 ಮಂದಿ ರೈತರ ವಿರುದ್ಧ ಬಂಧನದ ವಾರೆಂಟ್ ಹೊರಡಿಸಲಾಗಿದೆ ಎಂದು ಭಾರತಿ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ಆರೋಪಿಸಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಭಾರತಿ ಕಿಸಾನ್ ಯೂನಿಯನ್ ( ಕ್ರಾಂತಿಕಾರಿ ) ಅಧ್ಯಕ್ಷ ಬಲದೇವ್ ಸಿಂಗ್ ಝಿರಾ, ಪ್ರತಿಭಟನಾನಿರತ ರೈತರೊಬ್ಬರ ಜಾಮೀನು ಅರ್ಜಿಯನ್ನು ಫಿರೋಜ್ಪುರದ ನ್ಯಾಯಾಲಯ ತಿರಸ್ಕರಿಸಿದೆ. ಈ ವೇಳೆ ಎಫ್ಐಆರ್ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ ಆರೋಪ) ನಮೂದಿಸಿರುವ ವಿಷಯ ಬೆಳಕಿಗೆ ಬಂದಿದೆ ಎಂದು ಕಿಡಿಕಾರಿದ್ದಾರೆ.
ಘಟನೆ ನಡೆದು ಮೂರು ವರ್ಷಗಳೇ ಕಳೆದಿವೆ. ಆದರೆ ರಾಜ್ಯ ಸರ್ಕಾರವು ಕೇಂದಕ್ಕೆ ಮಣಿದು ಕೆಲಸ ಮಾಡುತ್ತಿದೆ. ಪ್ರತಿಭಟನೆ ನಡೆಸಲು ರೈತರು ಜಿಲ್ಲಾಡಳಿತದತ್ತ ತೆರಳಿದ್ದರು. ಇದೇ ವೇಳೆ ಮೋದಿ ಅವರು ಆಗಮಿಸಿದ್ದರು. ಮೋದಿ ಆ ಮಾರ್ಗದಲ್ಲಿ ಬರುವ ವಿಷಯ ರೈತರಿಗೆ ಗೊತ್ತಿರಲಿಲ್ಲ ಎಂದು ಬಲದೇವ್ ಸಮರ್ಥಿಸಿಕೊಂಡರು.
ರೈತರ ವಿವಿಧ ಬೇಡಿಕೆ ಈಡೇರಿಕೆಯಾಗಿ ಶಂಭು ಮತ್ತು ಖಾನೌರಿ ಗಡಿಗಳಲ್ಲಿ ಪ್ರತಿಭಟನೆಯ ಮುಂದುವರಿದಿದೆ. ಈ ನಡುವೆ ಮಾತನಾಡಿದ ರೈತರ ವಿರುದ್ಧ ಕೊಲೆ ಯತ್ನದ ಆರೋಪವನ್ನು ಮಾಡಿದ್ದಕ್ಕಾಗಿ ಸುರ್ಜಿತ್ ಸಿಂಗ್ ಖಂಡಿಸಿದ್ದಾರೆ.
2022ರಲ್ಲಿ, ಪಂಜಾಬ್ನ ಫಿರೋಜ್ಪುರದಲ್ಲಿ ನಡೆಯಬೇಕಿದ್ದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ರಸ್ತೆ ಮಾರ್ಗದಲ್ಲಿ ಹೋಗುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು, ರಸ್ತೆತಡೆಯ ಕಾರಣ ಮೇಲ್ಸೇತುವೆಯಲ್ಲಿ 15–20 ನಿಮಿಷ ಸಿಲುಕಿದ್ದರು. ಮೋದಿ ಅವರು ಪಂಜಾಬ್ಗೆ ಭೇಟಿ ನೀಡುವುದನ್ನು ವಿರೋಧಿಸಿದ ರೈತ ಸಂಘಟನೆಯು ರಸ್ತೆತಡೆ ನಡೆಸಿತ್ತು. ಹೀಗಾಗಿ, ತಮ್ಮ ಕಾರ್ಯಕ್ರಮವನ್ನು ರದ್ದುಪಡಿಸಿ ಅವರು ವಾಪಸಾಗಿದ್ದರು. ಇದು ದೇಶದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ಬಳಿಕ ಭದ್ರತಾ ಲೋಪದ ತನಿಖೆಗೆ ಪಂಜಾಬ್ ಹಾಗೂ ಕೇಂದ್ರ ಸರ್ಕಾರಗಳು ಪ್ರತ್ಯೇಕ ಸಮಿತಿ ರಚಿಸಿದ್ದವು. ಸುಪ್ರೀಂ ಕೋರ್ಟ್ ಸಹ ಸಮಿತಿ ರಚಿಸಿತ್ತು. ಇದಕ್ಕೆ ಪೊಲೀಸರ ವೈಫಲ್ಯವೇ ಕಾರಣ ಎಂದು ಸುಪ್ರೀಂ ಕೋರ್ಟ್ ಸಮಿತಿ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.