ರಾಜಕೀಯ, ಉದ್ಯಮ, ಮನರಂಜನೆ ಕ್ಷೇತ್ರದ ಅನೇಕ ಗಣ್ಯರು ಈ ವರ್ಷ(2024) ನಿಧನರಾಗಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ರತನ್ ಟಾಟಾ–
ಹೆಸರಾಂತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಅಕ್ಟೋಬರ್ 9ರಂದು ತಮ್ಮ 86ನೇ ವಯಸ್ಸಿನಲ್ಲಿ ಮುಂಬೈನಲ್ಲಿ ಕೊನೆಯುಸಿರೆಳೆದರು. ವಿಶ್ವದ ಅತ್ಯಂತ ಪ್ರಭಾವಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದರೂ ರತನ್ ಟಾಟಾ ಅವರು ವಿಶ್ವದ ಬಿಲಿಯನೇರ್ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಪೈಪೋಟಿ ನಡೆಸಲಿಲ್ಲ. 100ಕ್ಕೂ ಹೆಚ್ಚು ದೇಶಗಳಲ್ಲಿ 30 ಕಂಪನಿಗಳನ್ನು ನಿಭಾಯಿಸಿದ್ದರು. ಆಡಂಬರವಿಲ್ಲದ, ಸಂತನಂತೆ ಬದುಕಿದ್ದರು.
ಸೀತಾರಾಂ ಯೆಚೂರಿ–
ತೀವ್ರ ಅನಾರೋಗ್ಯದಿಂದಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಕಮ್ಯುನಿಷ್ಟ್ ಪಕ್ಷದ (ಮಾರ್ಕ್ಸ್ವಾದ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ 12 ಸೆಪ್ಟೆಂಬರ್ ರಂದು ನಿಧನರಾದರು. ಅವರಿಗೆ 72 ವರ್ಷ ಆಗಿತ್ತು. ದೇಶದ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಅವರು, 32 ವರ್ಷಗಳಿಂದ ಸಿಪಿಎಂನ ಕೇಂದ್ರ ಸಮಿತಿ ಪಾಲಿಟ್ ಬ್ಯೂರೊ ಸದಸ್ಯರಾಗಿದ್ದರು. 2015ರಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2005–2017ರವರೆಗೆ ಪಶ್ಚಿಮ ಬಂಗಾಳದಿಂದ ರಾಜ್ಯಸಭಾ ಸದಸ್ಯರಾಗಿದ್ದರು.
ತಬಲಾ ವಾದಕ ಜಾಕಿರ್ ಹುಸೇನ್–
ಆರು ದಶಕಗಳ ವೃತ್ತಿಜೀವನದಲ್ಲಿ ಸಂಗೀತ ಪ್ರಿಯರನ್ನು ಮಂತ್ರಮುಗ್ಧರನ್ನಾಗಿಸಿದ ವಿಶ್ವವಿಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ (73) ಡಿಸೆಂಬರ್ 16ರಂದು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು. ತಬಲಾದಿಂದಲೇ ಪ್ರೀತಿಯ ಪರ್ವತ ಸೃಷ್ಟಿಸಿದ ಮಾಂತ್ರಿಕ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ಭಾಜನರಾಗಿದ್ದರು. 1998ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ 2023ರಲ್ಲಿ ಪದ್ಮ ವಿಭೂಷಣ ಗೌರವ ಹಾಗೂ ನಾಲ್ಕು ಗ್ರ್ಯಾಮಿ ಪುರಸ್ಕಾರ ಪಡೆದಿದ್ದಾರೆ.
ಎಸ್.ಎಂ. ಕೃಷ್ಣ–
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಡಿಸೆಂಬರ್ 10ರಂದು ನಿಧನರಾದರು. ಅವರಿಗೆ 93 ವರ್ಷವಾಗಿತ್ತು. ಅತ್ಯಂತ ಸಿರಿವಂತ ಕುಟುಂಬದಿಂದ ಬಂದು, ವಿದೇಶಗಳಲ್ಲಿ ಓದಿ ಒಂದು ರೀತಿಯೊಳಗೆ ‘ಫಾರಿನ್ ಗೌಡ’ ಎಂಬ ರೀತಿಯೊಳಗೆ ಬದುಕಿದ ಎಸ್.ಎಂ. ಕೃಷ್ಣ ಅವರು, ನಾಡ ಜನರ ಸಂಕಷ್ಟಗಳಿಗೆ ಕಿವಿಯಾಗಿ, ಬಡವರು–ಮಧ್ಯಮವರ್ಗದವರ ಜೀವನ ಸಹ್ಯವಾಗಬೇಕೆಂದು ಧ್ಯಾನಿಸಿದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.