ADVERTISEMENT

ಮುಂಬೈನಲ್ಲಿ ಮಳೆ ಅಬ್ಬರ: 21 ಸಾವು, ರೈಲು ಸೇವೆ ಅಸ್ತವ್ಯಸ್ತ, 2 ದಿನ ರಜೆ ಘೋಷಣೆ 

ಏಜೆನ್ಸೀಸ್
Published 2 ಜುಲೈ 2019, 2:06 IST
Last Updated 2 ಜುಲೈ 2019, 2:06 IST
   

ಮುಂಬೈ/ಪುಣೆ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ವಾಣಿಜ್ಯನಗರಿ ಮುಂಬೈ ಮತ್ತು ಪುಣೆ ತತ್ತರಿಸಿವೆ. ಮಳೆಯಿಂದಾದ ಅನಾಹುತಗಳಲ್ಲಿ ಈ ವರೆಗೆಅಲ್ಲಿ 21 ಮಂದಿ ಮೃತಪಟ್ಟಿದ್ದಾರೆ.

ಸೋಮವಾರ ರಾತ್ರಿ ಮಲದ್‌ ಪೂರ್ವ ವಲಯದ ಪಿಂಪ್ರಿಪಾದ ಎಂಬಲ್ಲಿ ಮಳೆಯಿಂದಾಗಿ ಮನೆಗಳ ಗೋಡೆ ಕುಸಿತ ಉಂಟಾಯಿತು. ಘಟನೆಯಲ್ಲಿ 13 ಮಂದಿ ಅಸುನೀಗಿದ್ದಾರೆ. 13 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗಾಗಿ ಅಗ್ನಿಶಾಮಕ ದಳ, ಬೃಹನ್‌ ಮುಂಬೈ ಪಾಲಿಕೆ ಸಿಬ್ಬಂದಿ ಅವಿರತ ಶ್ರಮಿಸುತ್ತಿದ್ದಾರೆ.

ಇದೇ ವೇಳೆ ಪುಣೆಯಲ್ಲಿಯೂ ಮಳೆ ಅಬ್ಬರಿಸುತ್ತಿದೆ. ರಾತ್ರಿ 1.15ರ ಸುಮಾರಿನಲ್ಲಿ ಭಾರಿ ಮಳೆಯಿಂದಾಗಿ ಅಂಬೆಗಾನ್‌ ಎಂಬಲ್ಲಿರುವ ಶಿಂಗದ್‌ ಕಾಲೇಜಿನ ಕಾಂಪೌಡ್‌ ಕುಸಿದಿದೆ. ಅವಶೇಷಗಳಿಸಿಲುಕಿ 6 ಮಂದಿ ಮೃತಪಟ್ಟಿದ್ದಾರೆ. ಇದರ ಜತೆಗೆ, ಮತ್ತೆರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಸಾವಿಗೀಡಾಗಿದ್ದಾರೆ.

ADVERTISEMENT

ಮಲದ್‌ ಗೋಡೆ ಕುಸಿತದಿಂದಾದ ಸಾವು ನೋವಿನ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಬೇಸರ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರ 5 ಲಕ್ಷ ಪರಿಹಾರ ನೀಡುತ್ತಿರುವುದಾಗಿ ಅವರು ಘೋಷಿಸಿದ್ದಾರೆ.

ಮುಂದಿನ ಕೆಲ ಗಂಟೆಗಳಲ್ಲಿ ಪುಣೆಯಲ್ಲಿ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು, ಎಚ್ಚರದಿಂದ ಇರುವಂತೆ ಪುಣೆ ಪಾಲಿಕೆಯು ನಾಗರಿಕರಲ್ಲಿ ಮನವಿ ಮಾಡಿದೆ. ಹೆಚ್ಚಾಗಿ ಹೊರಗೆ ಓಡಾಡದಂತೆಯೂ, ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆಯೂ, ಅಪಾಯ ಎದುರಾದ ಸನ್ನಿವೇಶದಲ್ಲಿ ಎನ್‌ಡಿಆರ್‌ಎಫ್‌ ಮತ್ತು ಅಗ್ನಿಶಾಮಕ ದಳದವನ್ನು ಸಂಪರ್ಕಿಸುವಂತೆ ಪಾಲಿಕೆ ಕೋರಿದೆ.

ವಾಣಿಜ್ಯನಗರಿಯಲ್ಲಿ ಸುರಿಯುತ್ತಿರುವ ಜೋರು ಮಳೆಯು ರೈಲು ಸಂಚಾರವನ್ನು ಅಸ್ತವ್ಯವಸ್ತಗೊಳಿಸಿದೆ. ಹೀಗಾಗಿ ಮುಂಬೈ–ಪುಣೆ ನಡುವಣ ರೈಲು ಸಂಚಾರವನ್ನು ಸಂಪೂರ್ಣ ರದ್ದು ಮಾಡಲಾಗಿದೆ.

ಇನ್ನೊಂದೆಡೆ, ಮಳೆಯಿಂದಾಗಿ ವಿಮಾನಗಳ ಹಾರಾಟಕ್ಕೂ ತೊಂದರೆಯಾಗುತ್ತಿದೆ. ಸೋಮವಾರ ಜೈಪುರದಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನವೊಂದು, ರನ್‌ವೇಯಿಂದದ ಹೊರ ಜಾರಿತು. ಅದೃಷ್ಟವಶಾತ್‌, ಘಟನೆಯಲ್ಲಿ ಯಾವೊಬ್ಬ ಪ್ರಯಾಣಿಕರಿಗೂ ತೊಂದರೆಯಾಗಿಲ್ಲ.

ಮಳೆಯಿಂದಾಗಬಹುದಾದ ಅನಾಹುತಗಳನ್ನು ತಡೆಯುವ ಸಲುವಾಗಿ ಮುಂಬೈನಲ್ಲಿ ಎರಡು ದಿನಗಳ ಕಾಲ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ.

ಮುಂಬೈನಲ್ಲಿ ಕಳೆದ ಎರಡು ದಿನಗಳಿಂದಲೂ ಸುರಿಯುತ್ತಿರುವ ಮಳೆಯೂ ದಶಕಗಳಲ್ಲೇ ದಾಖಲೆ ಪ್ರಮಾಣದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.