ಪಿಥೋರಗಢ: ಉತ್ತರಾಖಂಡದಲ್ಲಿ ಭೀಕರ ಮಳೆ ಮುಂದುವರಿದಿದ್ದು, ಮಾಡ್ಕೋಟ್ ಗ್ರಾಮದಲ್ಲಿ ಮೂರು ಜನರು ಮೇಘಸ್ಫೋಟದಿಂದಾಗಿ ಪ್ರಾಣ ಕಳೆದುಕೊಂಡರೆ, ಪಕ್ಕದ ಹಳ್ಳಿಯ ಎಂಟು ಜನರು ಕಾಣೆಯಾಗಿದ್ದಾರೆ ಪಿಥೋರಗಢದ ಜಿಲ್ಲಾಧಿಕಾರಿ ವಿ.ಕೆ. ಜಗ್ದಾಂಡೆ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ರಕ್ಷಣಾ ತಂಡವಿದ್ದು, ಕಾರ್ಯಾಚರಣೆ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಡೆಹರಾಡೂನ್ನಿಂದ ಸುಮಾರು 450 ಕಿ.ಮೀ ದೂರದ ಉತ್ತರಾಖಂಡದ ಪಿಥೋರಗಡ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಪಟ್ಟಣ ಮುನ್ಸಿಯರಿಯಲ್ಲಿ ಶನಿವಾರ ರಾತ್ರಿ ಸುರಿದ ನಿರಂತರ ಮಳೆಯಿಂದಾಗಿ ಕನಿಷ್ಠ ನಾಲ್ಕು ಮನೆಗಳು ಕುಸಿದು, ಒಂದು ಸೇತುವೆಗೆ ಹಾನಿಯಾಗಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಈ ಪ್ರದೇಶದ ಗೋರಿ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಅದರ ಸಮೀಪ ವಾಸಿಸುವ ಜನರನ್ನು ಸ್ಥಳೀಯ ಆಡಳಿತವು ಸುರಕ್ಷಿತ ಪ್ರದೇಶಗಳತ್ತ ಸ್ಥಳಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುನ್ಸಿಯಾರಿ ಪ್ರದೇಶದಲ್ಲಿ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಭಾರಿ ಮಳೆ ಆರಂಭವಾಗಿತ್ತು. ಮಳೆ ಹೆಚ್ಚಾದಂತೆ, ಗೋರಿ ನದಿಯ ಬಳಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸ್ಥಳೀಯ ಸ್ಟೇಷನ್ ಹೌಸ್ ಅಧಿಕಾರಿ ಮತ್ತು ಸಂಬಂಧಪಟ್ಟ ಉಪ ವಿಭಾಗೀಯ ಜಿಲ್ಲಾಧಿಕಾರಿ ಈ ಪ್ರದೇಶವನ್ನು ತಲುಪಿದರು ಎಂದು ಪಿತ್ರೋರಗಢದ ಜಿಲ್ಲಾ ಮಾಹಿತಿ ಅಧಿಕಾರಿ ಗಿರಿಜಾ ಶಂಕರ್ ಜೋಶಿ ಹೇಳಿದ್ದಾರೆ.
ಭಾರಿ ಮಳೆಯಲ್ಲಿ ಸೇತುವೆಗೂ ತೀವ್ರ ಹಾನಿಯಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕಳೆದ ವಾರವಷ್ಟೇ ಮೇಘಸ್ಫೋಟ ಮತ್ತು ಭಾರಿ ಮಳೆಯಿಂದಾಗಿ ಕೇದಾರನಾಥ ಕಣಿವೆಯಲ್ಲಿ ಭಾರಿ ಹಾನಿಗೆ ಕಾರಣವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.