ನವದೆಹಲಿ: ದೇಶದ ಏಳು ರಾಜ್ಯಗಳಲ್ಲಿ ಸೂಚಿತ ಜನಸಂಖ್ಯೆಗಿಂತಲೂ ಆಧಾರ್ ಹೊಂದಿರುವವರ ಸಂಖ್ಯೆಯೇ ಹೆಚ್ಚಿದೆಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಗುರುವಾರ ತಿಳಿಸಿದೆ.
ರಾಜ್ಯಸಭೆಯಲ್ಲಿ ಇಂದು ಈ ವಿಚಾರ ತಿಳಿಸಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಸಂಜಯ್ ದೋತ್ರೆ, ‘2019ರ ಡಿಸೆಂಬರ್ 31ಕ್ಕೆ ಅಂತ್ಯವಾದಂತೆ ಏಳು ರಾಜ್ಯಗಳಲ್ಲಿ ಅಲ್ಲಿನ ಜನಸಂಖ್ಯೆಗಿಂತಲೂ ಹೆಚ್ಚಿನ ಆಧಾರ್ಗಳಿವೆ. ಈಗಾಗಲೇ ಮೃತಪಟ್ಟವರ ಕಾರಣಕ್ಕಾಗಿ ಈ ವ್ಯತ್ಯಾಸ ಕಂಡು ಬಂದಿಲ್ಲ. ಯಾಕೆಂದರೆ, ಈಗಾಗಲೇ ಮೃತಪಟ್ಟವರ ಮಾಹಿತಿಯನ್ನು ಆಧಾರ್ ಪರಿಷ್ಕರಣೆಯಲ್ಲಿ ಸೇರಿಸಲಾಗಿದೆ. ಜನಸಂಖ್ಯೆಯ ಅಂದಾಜು ಲೆಕ್ಕಾಚಾರದಲ್ಲಿನ ದೋಷ ಮತ್ತು ವಲಸಿಗರ ಮಾಹಿತಿ ಇದರಲ್ಲಿ ಸೇರಿಸದಿರುವುದೇ ವ್ಯತ್ಯಾಸಕ್ಕೆ ಕಾರಣ,’ ಎಂದು ಅವರು ಹೇಳಿದ್ದಾರೆ.
‘ದೇಶದ ಯಾವುದಾದರೂ ರಾಜ್ಯದಲ್ಲಿ ಸೂಚಿತ ಜನಸಂಖ್ಯೆಗಿಂತಲೂ ಹೆಚ್ಚಿನ ಆಧಾರ್ಗಳು ಇವೆಯೇ?’ ಎಂದು ಕೇಳಲಾದ ಪ್ರಶ್ನೆಗೆ ಸಚಿವ ಸಂಜಯ್ ದೋತ್ರೆ ಮೇಲಿನಂತೆ ಉತ್ತರಿಸಿದ್ದಾರೆ.
ಆದರೆ, ಜನಸಂಖ್ಯೆ ಮತ್ತು ಆಧಾರ್ ಹೊಂದಿದವರ ಸಂಖ್ಯೆಯಲ್ಲಿ ವ್ಯತ್ಯಾಸವಿರುವ ರಾಜ್ಯಗಳ ಹೆಸರುಗಳ ಬಗ್ಗೆ ಸಚಿವರಿಂದ ಮಾಹಿತಿ ಲಭ್ಯವಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.