ADVERTISEMENT

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 8.31 ಕೋಟಿ ರೈತರಿಗೆ ₹16,621 ಕೋಟಿ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 12:39 IST
Last Updated 14 ಏಪ್ರಿಲ್ 2020, 12:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್-19 ಹರಡದಿರಲು ಮಾರ್ಚ್ 24ರಿಂದ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದ್ದು, ಅಂದಿನಿಂದ ಪ್ರಧಾನ ಮಂತ್ರಿ-ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರವು ಸುಮಾರು 8.31 ಕೋಟಿ ಫಲಾನುಭವಿ ರೈತರಿಗೆ ₹16,621 ಕೋಟಿ ವಿತರಿಸಿದೆ.

ಕಳೆದ ವರ್ಷದ ಬಾಕಿ ಉಳಿಸಿದ್ದ 83.77 ಲಕ್ಷ ರೈತರಿಗೆ ಒಟ್ಟು ₹ 1,674.43 ಕೋಟಿ ಹಣವನ್ನು ಪಾವತಿಸಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಏಪ್ರಿಲ್ 1 ರಿಂದ ಪ್ರಾರಂಭವಾದ 2020-21ರ ಆರ್ಥಿಕ ವರ್ಷದಲ್ಲಿ ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ ಮೊದಲ ಕಂತಿನಲ್ಲಿ ₹ 14,945 ಕೋಟಿಗಳನ್ನು 7.47 ಕೋಟಿ ರೈತರಿಗೆ ಬಿಡುಗಡೆ ಮಾಡಲಾಗಿದೆ.

ADVERTISEMENT

ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಕೇಂದ್ರ ಸರ್ಕಾರವು ವರ್ಷಕ್ಕೆ ₹ 6,000 ಗಳಂತೆ ಮೂರು ಸಮಾನ ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತದೆ. ಇದು ಹೆಚ್ಚಿನ ಆದಾಯ ಹೊಂದಿರುವುದಕ್ಕೆ ಸಂಬಂಧಿಸಿದಂತೆ ಕೆಲವು ಹೊರಗಿಡುವ ಮಾನದಂಡಗಳಿಗೆ ಒಳಪಟ್ಟಿರುತ್ತದೆ.

ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣದ ಪರಿಹಾರವನ್ನು ಒದಗಿಸಲು ಈ ಯೋಜನೆಯಡಿ 8.69 ಕೋಟಿ ಫಲಾನುಭವಿಗಳಿಗೆ ಮೊದಲ ಕಂತಿನಲ್ಲಿ ₹ 2,000 ಗಳನ್ನು ಏಪ್ರಿಲ್ ಮೊದಲ ವಾರದಲ್ಲಿ ಖಾತೆಗೆ ವರ್ಗಾಯಿಸುವುದಾಗಿ ಮಾರ್ಚ್.27ರಂದು ಸರ್ಕಾರ ಭರವಸೆ ನೀಡಿತ್ತು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂ-ಜಿಕೆವೈ) ಅಡಿಯಲ್ಲಿ ಪಿಡಿಎಸ್ ಫಲಾನುಭವಿಗಳಿಗೆ ಉಚಿತ ವಿತರಣೆಗಾಗಿ 3,985 ಟನ್ ದ್ವಿದಳ ಧಾನ್ಯಗಳನ್ನು ರವಾನಿಸಿದೆ ಎಂದು ಕೇಂದ್ರ ತಿಳಿಸಿದೆ.

ಇದಲ್ಲದೆ ಕೇಂದ್ರ ಕೃಷಿ ಸಚಿವಾಲಯವು ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಅಡಿಯಲ್ಲಿ ಈಶಾನ್ಯ, ಗುಡ್ಡಗಾಡು ಪ್ರದೇಶಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳಿಗೆ ಮಾತ್ರ ಎಲ್ಲ ಬೆಳೆಗಳಿಗೆ ಸಬ್ಸಿಡಿಯಲ್ಲಿ 'ಟ್ರೂತ್‌ಫುಲ್ ಲೇಬಲ್ ಸೀಡ್ಸ್‌ಗಳನ್ನು' ನೀಡಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.