ADVERTISEMENT

Jammu & Kashmir: ಕಳೆದ 25 ವರ್ಷಗಳಲ್ಲಿ ಸಾರ್ವಜನಿಕರ ಮೇಲೆ ನಡೆದ ಉಗ್ರರ ದಾಳಿಗಳು

ಪಿಟಿಐ
Published 23 ಏಪ್ರಿಲ್ 2025, 6:05 IST
Last Updated 23 ಏಪ್ರಿಲ್ 2025, 6:05 IST
<div class="paragraphs"><p>ಭದ್ರತಾ ಪಡೆ&nbsp;</p></div>

ಭದ್ರತಾ ಪಡೆ 

   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್ ಪಟ್ಟಣದ ಸಮೀಪ ಉಗ್ರರು ಮಂಗಳವಾರ ಗುಂಡಿನ ದಾಳಿ ನಡೆಸಿದ್ದಾರೆ. ಪ್ರವಾಸಿ ತಾಣವಾದ ಹುಲ್ಲುಗಾವಲಿನಲ್ಲಿ ವಿಹರಿಸುತ್ತಿದ್ದ 28 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಡೆದ ಈ ದಾಳಿಯಲ್ಲಿ ಮೃತಪಟ್ಟವರಲ್ಲಿ ಇಬ್ಬರು ಕರ್ನಾಟಕದವರು ಹಾಗೂ ಇಬ್ಬರು ವಿದೇಶಿಯರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕಣಿವೆಯಲ್ಲಿ ಕಳೆದ 25 ವರ್ಷಗಳಲ್ಲಿ (2000ನೇ ಇಸವಿಯಿಂದ) ಈವರೆಗೆ ನಾಗರಿಕರನ್ನು ಗುರಿಯಾಗಿಸಿ ನಡೆದ ಪ್ರಮುಖ ಭಯೋತ್ಪಾದಕ ದಾಳಿಗಳ ಮಾಹಿತಿ ಇಲ್ಲಿದೆ.

  • ಮಾರ್ಚ್‌ 2000
    ಅಲ್ಪಸಂಖ್ಯಾತ ಸಿಖ್‌ ಸಮುದಾಯದವರನ್ನು ಗುರಿಯಾಗಿಸಿದ್ದ ಉಗ್ರರು ಅನಂತನಾಗ್‌ ಜಿಲ್ಲೆಯ ಛತ್ತಿಸಿಂಘ್‌ಪೋರಾ ಗ್ರಾಮದ ಮೇಲೆ 2000ನೇ ಇಸವಿಯ ಮಾರ್ಚ್‌ 21ರಂದು ದಾಳಿ ಮಾಡಿದ್ದರು. ಉಗ್ರರ ಕೃತ್ಯದಿಂದಾಗಿ 36 ಮಂದಿ ಮೃತಪಟ್ಟಿದ್ದರು.

  • ಆಗಸ್ಟ್‌ 2000
    ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ ನುನ್ವಾನ್‌ ಶಿಬಿರದ ಮೇಲೆ ಆಗಸ್ಟ್‌ನಲ್ಲಿ ದಾಳಿ ನಡೆಸಲಾಗಿತ್ತು. ಆ ವೇಳೆ 20ಕ್ಕೂ ಹೆಚ್ಚು ಯಾತ್ರಿಕರು ಸೇರಿದಂತೆ ಮೂವತ್ತೆರೆಡು ಮಂದಿ ಪ್ರಾಣ ಕಳೆದುಕೊಂಡಿದ್ದರು.

  • ಜುಲೈ 2001
    2001ರ ಜುಲೈನಲ್ಲಿ ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ ಮತ್ತೊಮ್ಮೆ ದಾಳಿ ನಡೆದಿತ್ತು. ಈ ಬಾರಿ ಶೇಷನಾಗ್‌ ಶಿಬಿರದ ಮೇಲೆ ನಡೆದ ದಾಳಿಯಲ್ಲಿ 13 ಮಂದಿ ಸಾವಿಗೀಡಾಗಿದ್ದರು.

  • ಅಕ್ಟೋಬರ್‌ 2001
    ಶ್ರೀನಗರದಲ್ಲಿನ ಜಮ್ಮು ಮತ್ತು ಕಾಶ್ಮೀರ ಶಾಸಕಾಂಗ ಭವನದ ಮೇಲೆ 2001ರ ಅಕ್ಟೋಬರ್‌ 1ರಂದು ನಡೆದ ಆತ್ಮಾಹುತಿ ದಾಳಿಯಲ್ಲಿ 36 ಮಂದಿ ಸಾವನ್ನಪ್ಪಿದ್ದರು.

  • ಆಗಸ್ಟ್‌ 2002
    ಉಗ್ರರು ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ 2002ರ ಆಗಸ್ಟ್‌ನಲ್ಲಿ ಛಂದನ್‌ವಾರಿ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ 11 ಯಾತ್ರಿಕರು ಮೃತಪಟ್ಟಿದ್ದರು.

  • ನವೆಂಬರ್‌ 2002
    ದಕ್ಷಿಣ ಕಾಶ್ಮೀರದಲ್ಲಿ ಹಾದುಹೋಗುವ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಮೀಪದ ಲೋವರ್‌ ಮುಂಡಾದಲ್ಲಿ ಎಲ್‌ಇಡಿ ಸ್ಫೋಟದಲ್ಲಿ 9 ಯೋಧರು, ಮೂವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 19 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಕೃತ್ಯವು 2002ರ ನವೆಂಬರ್‌ 23ರಂದು ನಡೆದಿತ್ತು.

  • ಮಾರ್ಚ್‌ 2003
    ಪುಲ್ವಾಮಾ ಜಿಲ್ಲೆಯ ನಂದಿಮಾರ್ಗ್ ಗ್ರಾಮದಲ್ಲಿ 11 ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 24 ಕಾಶ್ಮೀರಿ ಪಂಡಿತರನ್ನು 2003ರ ಮಾರ್ಚ್‌ 23ರಂದು ಹತ್ಯೆ ಮಾಡಲಾಗಿತ್ತು.

  • ಜೂನ್‌ 2005
    ಪುಲ್ವಾಮಾದ ಸರ್ಕಾರಿ ಶಾಲೆಯೊಂದರ ಮುಂಭಾಗ ಜನದಟ್ಟಣೆಯಿಂದ ಕೂಡಿದ್ದ ಮಾರುಕಟ್ಟೆಯಲ್ಲಿ ಸ್ಫೋಟಕಗಳಿದ್ದ ಕಾರು 2005ರ ಜೂನ್‌ 13ರಂದು ಸ್ಫೋಟಗೊಂಡಿತ್ತು. ದುರಂತದಲ್ಲಿ, ಇಬ್ಬರು ಶಾಲಾ ಮಕ್ಕಳು, ಸಿಆರ್‌ಪಿಎಫ್‌ನ ಮೂವರು ಅಧಿಕಾರಿಗಳು ಹಾಗೂ 13 ನಾಗರಿಕರು ಸಾವಿಗೀಡಾಗಿದ್ದರು. ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

  • ಜೂನ್‌ 2006
    ಉಗ್ರರು ಕುಲ್ಗಾಮ್‌ ಜಿಲ್ಲೆಯಲ್ಲಿ 2006ರ ಜೂನ್‌ 12ರಂದು ಬಿಹಾರ ಹಾಗೂ ನೇಪಾಳದ 9 ಕಾರ್ಮಿಕರನ್ನು ಹತ್ಯೆ ಮಾಡಿದ್ದರು.

  • ಜುಲೈ 2017
    ಅಮರನಾಥ ಯಾತ್ರಿಕರಿದ್ದ ಬಸ್‌ ಮೇಲೆ 2017ರ ಜುಲೈ 10ರಂದು ಉಗ್ರರು ದಾಳಿ ಮಾಡಿದ್ದರು. ಬಸ್‌ನಲ್ಲಿದ್ದ 8 ಮಂದಿ ಮೃತಪಟ್ಟಿದ್ದರು.

ಈ ದಾಳಿಗಳಷ್ಟೇ ಅಲ್ಲದೆ, ಉಗ್ರರು ಸೇನಾ ಸಿಬ್ಬಂದಿಯೊಂದಿಗೆ ನಿರಂತರವಾಗಿ ಸಂಘರ್ಷ ನಡೆಸುತ್ತಿದ್ದಾರೆ. ಸಿಆರ್‌ಪಿಎಫ್‌ ಯೋಧರನ್ನು ಗುರಿಯಾಗಿಸಿ ಪುಲ್ವಾಮಾದಲ್ಲಿ 2019ರಲ್ಲಿ ನಡೆಸಿದ ದಾಳಿ ಅದಕ್ಕೆ ಪ್ರಮುಖ ಉದಾಹರಣೆಯಾಗಿದೆ. ಆ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.