ಮುಹಮ್ಮದ್ ಅಲಿ
– ಪಿಟಿಐ ಚಿತ್ರ
ಬಹರಿಚ್: ಇತ್ತೀಚೆಗೆ ಭಾರಿ ಕೋಮು ಸಂಘರ್ಷಕ್ಕೆ ಗುರಿಯಾಗಿದ್ದ ಉತ್ತರ ಪ್ರದೇಶದ ಬಹರಿಚ್ನಲ್ಲಿ ದೇಶಕ್ಕೆ ಮಾದರಿಯಾಗುವಂತಹ ಸಾಮರಸ್ಯದ ಘಟನೆಯೊಂದು ಹಲವು ವರ್ಷಗಳಿಂದ ಸದ್ದಿಲ್ಲದೆ ನಡೆಯುತ್ತಿದೆ.
ಮುಸ್ಲಿಂ ವ್ಯಕ್ತಿಯೊಬ್ಬರು ಕಳೆದ 18 ವರ್ಷಗಳಿಂದ ಹಿಂದೂ ದೇಗುಲದ ಅಧ್ಯಕ್ಷರಾಗಿ, ಉಸ್ತುವಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸಾಮರಸ್ಯದ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಮುಹಮ್ಮದ್ ಅಲಿ ಎಂಬವರು ದೇಗುಲದ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ.
ಬಹರಿಚ್ ಜಿಲ್ಲಾ ಕೇಂದ್ರದಿಂದ 27 ಕಿ.ಮೀ. ದೂರದಲ್ಲಿ ಇರುವ ಜೈತಾಪುರದಲ್ಲಿರುವ ವೃದ್ಧ ಮಾತೇಶ್ವರಿ ಮಾತಾ ಗೃಹದೇವಿ ದೇಗುಲದ ಉಸ್ತುವಾರಿಯನ್ನು ನೋಡಿಕೊಂಡು ಬರುತ್ತಿದ್ದಾರೆ. ಈ ದೇಗುಲಕ್ಕೆ ಜಮೀನನ್ನು ಮುಸಲ್ಮಾನ ವ್ಯಕ್ತಿಯೊಬ್ಬರು ದಾನ ನೀಡಿದ್ದಾರೆ.
ಇಸ್ಲಾಮಿನ ಆಚರಣೆಗಳಾದ ಉಪವಾಸ, ನಮಾಜ್ ಅನ್ನು ನಿರ್ವಹಿಸುವುದರ ಜೊತೆಗೆ 58ದ ವರ್ಷ ಅಲಿ, ಗೃಹದೇವಿ ಹಾಗೂ ಹನುಮಂತನ ಆರಾಧನೆಯನ್ನೂ ಮಾಡುತ್ತಾರೆ.
‘ 7 ವರ್ಷದವನಾಗಿದ್ದಾಗ ನನಗೆ ತೊನ್ನು ರೋಗ ಬಾಧಿಸಿತ್ತು. ಇದರಿಂದ ನನ್ನ ಕಣ್ಣು ಬಿಳಿಯಾಗಿತ್ತು. ನನ್ನ ತಾಯಿ ಈ ದೇಗುಲಕ್ಕೆ ಕರೆದುಕೊಂಡು ಬಂದ ಬಳಿಕ ರೋಗ ವಾಸಿಯಾಯಿತು. ಹೀಗಾಗಿ ಈ ದೇಗುಲದೊಂದಿಗೆ ನಂಟು ಬೆಳೆಯಿತು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.
‘2007ರಲ್ಲಿ ದೇವಿ ಕನಸಿನಲ್ಲಿ ಬಂದು ದೇಗುಲ ಸೇವೆ ಮಾಡಲು ನಿರ್ದೇಶಿಸಿದಳು. ಅಂದಿನಿಂದ ನಿತ್ಯ ದೇಗುಲದಲ್ಲಿ ಸೇವೆ ಮಾಡಲು ಆರಂಭಿಸಿದೆ’ ಎಂದು ಅಲಿ ಹೇಳಿದ್ದಾರೆ.
ಅಲಿ ಅವರ ನೇತೃತ್ವದಲ್ಲಿ ದೇವಾಲಯವನ್ನು ಅಭಿವೃದ್ಧಿ ಪಡಿಸಲಾಗಿದೆ. ಸುಗ್ಗಿ ಕಾಲದಲ್ಲಿ ಧಾನ್ಯ ಸಂಗ್ರಹಣೆ, ನಿಧಿ ಸಂಗ್ರಹಣೆಯಂತಹ ಉಪಕ್ರಮಗಳು ಗಮನಾರ್ಹ ಸಂಪನ್ಮೂಲಗಳನ್ನು ಸೃಷ್ಟಿಸಿವೆ. ಈ ವರ್ಷವೇ ದೇವಾಲಯದ ಅಭಿವೃದ್ಧಿಗೆ ₹ 2.7 ಲಕ್ಷ ಸಂಗ್ರಹಿಸಲಾಗಿದೆ ಎಂದು ಅಲಿ ತಿಳಿಸಿದ್ದಾರೆ.
ಸಾರ್ವಜನಿಕರ ದೇಣಿಗೆ ಮತ್ತು ಸರ್ಕಾರದ ಅನುದಾನ ಸೇರಿ ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಗಾಗಿ ₹30.40 ಲಕ್ಷ ಖರ್ಚು ಮಾಡಲಾಗಿದೆ. ಇತ್ತೀಚೆಗೆ, ಜೈಪುರದಿಂದ ತರಿಸಲಾದ ₹ 2.5 ಲಕ್ಷ ವೆಚ್ಚದ 5.5 ಅಡಿ ಹನುಂತನದ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಐದು ದಿನ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು ಎಂದು ಅಲಿ ಹೇಳಿದ್ದಾರೆ.
ಧರ್ಮ, ಲಿಂಗದ ಗೋಡೆಯನ್ನು ಮೀರಿ ಜನ ಈ ದೇಗುಲಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ನಾನು ಹಿಂದೂ ಮತ್ತು ಮುಸ್ಲಿಂ ಧರ್ಮಗಳೆರಡನ್ನೂ ಗೌರವಿಸುತ್ತೇನೆ. ದೇವಸ್ಥಾನಕ್ಕೆ ಸೇವೆ ಸಲ್ಲಿಸುವುದು ನನ್ನ ಭಕ್ತಿ ಮತ್ತು ಕೋಮು ಸೌಹಾರ್ದತೆಗೆ ಬಗ್ಗೆ ಇರುವ ನನ್ನ ಬದ್ಧತೆಯ ಪ್ರತೀಕ ಎನ್ನುವುದು ಅಲಿಯವರ ಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.