
ಸಾಂದರ್ಭಿಕ ಚಿತ್ರ
ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಗೆ ದೆಹಲಿ ಹಾಗೂ ಇನ್ನಿತರ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಎಎಪಿ ನಡುವಣ ಮೈತ್ರಿ ಬಗ್ಗೆ ಇಂದು (ಶನಿವಾರ) ಅಧಿಕೃತ ಘೋಷಣೆಯಾಗಲಿದೆ ಎಂದು ಎಎಪಿಯ ಮೂಲಗಳು ತಿಳಿಸಿವೆ.
ಎರಡೂ ಪಕ್ಷಗಳು ವಿಪಕ್ಷಗಳ ‘ಇಂಡಿಯಾ’ ಬಣದ ಪಾಲುದಾರರಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಪಣತೊಟ್ಟಿವೆ.
ದೆಹಲಿ, ಗುಜರಾತ್, ಗೋವಾ, ಚಂಡೀಗಢ ಹಾಗೂ ಹರಿಯಾಣದಲ್ಲಿ ಸೀಟು ಹಂಚಿಕೆ ಸಂಬಂಧ ಉಭಯ ಪಕ್ಷಗಳು ಬೆಳಿಗ್ಗೆ 11.30ಗಂಟೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಲಿವೆ.
ದೆಹಲಿಯಲ್ಲಿ ಒಟ್ಟು ಏಳು ಲೋಕಸಭಾ ಕ್ಷೇತ್ರಗಳಿದ್ದು, ನಾಲ್ಕರಲ್ಲಿ ಎಎಪಿ ಸ್ಪರ್ಧೆ ಮಾಡಲಿದೆ. ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ, ನವದೆಹಲಿ ಹಾಗೂ ಪೂರ್ವ ದೆಹಲಿಯಲ್ಲಿ ಎಎಪಿ ಸ್ಪರ್ಧೆ ಮಾಡಲಿದ್ದು, ಚಾಂದಿನಿ ಚೌಕ್, ಈಶಾನ್ಯ ದೆಹಲಿ ಮತ್ತು ವಾಯುವ್ಯ ದೆಹಲಿಯಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಗೊತ್ತಾಗಿದೆ.
ಗುಜರಾತ್ನ ಭರೂಚ್ ಹಾಗೂ ಭಾವನಗರ ಕ್ಷೇತ್ರಕ್ಕೆ ಎಎಪಿ ತನ್ನ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿದೆ. ಗೋವಾದಲ್ಲಿ ದಕ್ಷಿಣ ಗೋವಾ, ಹರಿಯಾಣದಲ್ಲಿ ಫರಿದಾಬಾದ್ ಅಥವಾ ಗುರುಗ್ರಾಮ ಹಾಗೂ ಮತ್ತೊಂದು ಕ್ಷೇತ್ರ ಎಎಪಿಗೆ ಲಭಿಸಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.