ನವದೆಹಲಿ: ಕೊರೊನಾ ಲಾಕ್ಡೌನ್ ಅವಧಿಯಲ್ಲಿ ತೊಂದರೆಗೆ ಸಿಲುಕಿದವರಿಗೆ ಸಹಾಯ ಮಾಡಿ ರಾಷ್ಟ್ರದಾದ್ಯಂತ ಗಮನ ಸೆಳೆದಿರುವ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಹಾಗೂ ಸೋನುಸೂದ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಹಲವರು ಟ್ವಿಟರ್ನಲ್ಲಿ ಒತ್ತಾಯಿಸಿದ್ದಾರೆ.
ಇದಕ್ಕೆ ಪುರಾವೆಯನ್ನೂ ನೀಡಿರುವ ಟ್ವಿಟಿಗರು ಅಕ್ಷಯ್ ಕುಮಾರ್ ಪುಲ್ವಾಮದಲ್ಲಿ ಸೈನಿಕರ ಮೇಲೆ ದಾಳಿ, ಅಸ್ಸಾಂ ಪ್ರವಾಹ,
ಚೆನ್ನೈನಲ್ಲಿ ಸಂಭವಿಸಿದ ಪ್ರವಾಹ, ಕೊರೊನಾ ಅವಧಿಯಲ್ಲಿ ಸಮಸ್ಯೆಗೆ ಸಿಲುಕಿದವರಿಗೆ ಸಹಾಯ ಮಾಡಿರುವುದು, ಸೋನು ಸೂದ್
ಕೊರೊನಾ ಸಮಯದಲ್ಲಿ ವಲಸೆ ಕಾರ್ಮಿಕರು ಅವರ ಸ್ವಂತ ಸ್ಥಳಕ್ಕೆ ತಲುಪಲು ಸ್ವಂತ ಹಣದಲ್ಲಿ ಬಸ್ ವ್ಯವಸ್ಥೆ ಮಾಡಿರುವುದು,
ಕೊರೊನಾ ಸೇವೆಯಲ್ಲಿ ತೊಡಗಿದ್ದವರಿಗೆ ತಮ್ಮ ಹೋಟೆಲ್ ಸಂಪೂರ್ಣ ಬಿಟ್ಟುಕೊಟ್ಟಿರುವುದು, 1500 ಪಿಪಿಇ ಕಿಟ್ಗಳನ್ನು ವೈದ್ಯರಿಗೆ ನೀಡಿರುವುದನ್ನು ಗಮನಿಸಿದರೆ ಇವರಿಗೆ ಜನರ ಮೇಲೆ ಇರುವ ಸೇವಾ ಮನೋಭಾವವನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.
ಈ ಕುರಿತ ಟ್ವೀಟ್ಗಳು ಟ್ರೆಂಡ್ ಆಗಿವೆ. ಇವೆಲ್ಲಾ ಆರಂಭವಾಗಿದ್ದು, ಸುಹೇಲ್ ಎಂಬುವವರು ಟ್ವೀಟ್ ಮಾಡಿ ಮಾಜಿ ಪ್ರಧಾನಿ ದಿವಂಗತ
ಪಿ.ವಿ.ನರಸಿಂಹರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು. ಇದುವರೆಗೆ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿಲ್ಲ. ನರಸಿಂಹರಾವ್ ಯಾರದ್ದೇ ಸೇವಕರಾಗಿರಲಿಲ್ಲ. ತಮ್ಮದೇ ನಿರ್ಧಾರಗಳಿಂದ ದೇಶಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ್ದವರು. ಈಗಲಾದರೂ ಈ ಸರ್ಕಾರ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
2014ರ ಜೂನ್ 28ರಂದು ನರಸಿಂಹರಾವ್ ಹುಟ್ಟುಹಬ್ಬದ ದಿನ ಕೆಸಿಆರ್ ಕೂಡ ನರಸಿಂಹರಾವ್ ಅವರಿಗೆ ಭಾರತರತ್ನ ಪ್ರಶಸ್ತಿ ಕೊಡಬೇಕೆಂದು ಒತ್ತಾಯಿಸಿದ್ದರು. ಇದಲ್ಲದೆ, ಟ್ವಿಟಗರು ಫೀಲ್ಡ್ ಮಾರ್ಷಲ್ ಕಾರಿಯಪ್ಪ, ಪದ್ಮಭೂಷಣ, ಪದ್ಮವಿಭೂಷಣ ಸಾಮ್ ಮಾಣಿಕ್ ಷಾ ಅವರಿಗೂ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.