ADVERTISEMENT

ಅದಾನಿ ಪ್ರಕರಣ: ಇ.ಡಿ ತನ್ನ ಅಧಿಕಾರ ಬಿಟ್ಟುಕೊಡಬಾರದೆಂದು ವಿಪಕ್ಷಗಳಿಂದ ಪತ್ರ

ಪಿಟಿಐ
Published 15 ಮಾರ್ಚ್ 2023, 10:37 IST
Last Updated 15 ಮಾರ್ಚ್ 2023, 10:37 IST
ನವದೆಹಲಿಯಲ್ಲಿ ಬುಧವಾರ ಸಂಸತ್‌ ಭವನದಿಂದ ಜಾರಿ ನಿರ್ದೇಶನಾಲಯದತ್ತ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದ ವಿರೋಧ ಪಕ್ಷಗಳ ನಾಯಕರನ್ನು ಪೊಲೀಸರು ತಡೆದರು –ಪಿಟಿಐ ಚಿತ್ರ
ನವದೆಹಲಿಯಲ್ಲಿ ಬುಧವಾರ ಸಂಸತ್‌ ಭವನದಿಂದ ಜಾರಿ ನಿರ್ದೇಶನಾಲಯದತ್ತ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದ ವಿರೋಧ ಪಕ್ಷಗಳ ನಾಯಕರನ್ನು ಪೊಲೀಸರು ತಡೆದರು –ಪಿಟಿಐ ಚಿತ್ರ   

ನವದೆಹಲಿ: ‘ಶೆಲ್‌ ಕಂಪನಿಗಳ ಮೂಲಕ ಹಣ ಅಕ್ರಮ ವರ್ಗಾವಣೆ ಸೇರಿದಂತೆ ಅದಾನಿ ಸಮೂಹ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿ ಕೂಡಲೇ ತನಿಖೆ ಆರಂಭಿಸಬೇಕು’ ಎಂದು ಒತ್ತಾಯಿಸಿ ವಿವಿಧ ವಿರೋಧ ಪಕ್ಷಗಳ ನಾಯಕರು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಬುಧವಾರ ಪತ್ರ ಬರೆದಿದ್ದಾರೆ.

‘ಅದಾನಿ ಸಮೂಹದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಇ.ಡಿ ಮೌನ ತಾಳಬಾರದು ಹಾಗೂ ತನಗಿರುವ ಅಧಿಕಾರವನ್ನು ಬಿಟ್ಟುಕೊಡಬಾರದು ’ ಎಂದು ಇ.ಡಿ ನಿರ್ದೇಶಕ ಎಸ್.ಕೆ.ಮಿಶ್ರಾ ಅವರಿಗೆ ಇ–ಮೇಲ್‌ ಮೂಲಕ ಕಳಿಸಿರುವ ಪತ್ರದಲ್ಲಿ ವಿವರಿಸಿದ್ದಾರೆ.

ಕಾಂಗ್ರೆಸ್, ಸಿಪಿಐ, ಸಿಪಿಎಂ, ಜೆಡಿಯು, ಶಿವಸೇನಾ (ಉದ್ಧವ್‌ ಠಾಕ್ರೆ ಬಣ), ಆರ್‌ಜೆಡಿ, ಡಿಎಂಕೆ, ಜೆಎಂಎಂ, ಎಎಪಿ, ಐಯುಎಂಎಲ್‌, ವಿಸಿಕೆ, ಕೇರಳ ಕಾಂಗ್ರೆಸ್‌ ಪಕ್ಷಗಳ ನಾಯಕರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

ADVERTISEMENT

‘ಇತ್ತೀಚಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯವು ರಾಜಕೀಯವಾಗಿ ಅನುಕೂಲ ಮಾಡಿಕೊಟ್ಟಿದೆ ಎನ್ನಲಾದ ರೀತಿಯಲ್ಲಿ ಕೆಲ ಪ್ರಕರಣಗಳಲ್ಲಿ ತನಿಖೆ ನಡೆಸಿರುವುದು ನಮಗೆ ತಿಳಿದಿದೆ. ಅದಾನಿ ಸಮೂಹದ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸಲು ಸುಪ್ರೀಂಕೋರ್ಟ್‌ ನೇಮಿಸಿರುವ ಆಯೋಗದ ಮಿತಿಗಳ ಬಗ್ಗೆಯೂ ಅರಿವಿದೆ. ಹೀಗಾಗಿ, ಈ ವಿಷಯದಲ್ಲಿ ಇ.ಡಿ ತನ್ನ ಕಾರ್ಯವ್ಯಾಪ್ತಿ ಹಾಗೂ ಜವಾಬ್ದಾರಿಯಿಂದ ವಿಮುಖವಾಗುವುದು ಸರಿಯಲ್ಲ’ ಎಂದೂ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಪೊಲೀಸರಿಂದ ತಡೆ: ಇದಕ್ಕೂ ಮುನ್ನ, ವಿರೋಧ ಪಕ್ಷಗಳ ಮುಖಂಡರು, ದೂರು ಸಲ್ಲಿಸುವ ಸಲುವಾಗಿ ಸಂಸತ್‌ ಭವನದಿಂದ ಇ.ಡಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡರು. ಆದರೆ, ಪೊಲೀಸರು ಇದಕ್ಕೆ ಅವಕಾಶ ನೀಡದೇ, ವಿಜಯ ಚೌಕದಲ್ಲಿಯೇ ವಿಪಕ್ಷಗಳ ನಾಯಕರನ್ನು ತಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.