ADVERTISEMENT

ರಾಜ್‌ಘಾಟ್‌ಗೆ ಎಎಪಿ ಶಾಸಕರ ಭೇಟಿ; ಗಂಗಾ ಜಲದಿಂದ ಶುದ್ಧೀಕರಿಸುತ್ತೇವೆ ಎಂದ ಬಿಜೆಪಿ

ಪಿಟಿಐ
Published 25 ಆಗಸ್ಟ್ 2022, 10:31 IST
Last Updated 25 ಆಗಸ್ಟ್ 2022, 10:31 IST
   

ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿ ವಿವಾದದ ಸುತ್ತಲೂ ನೆಟ್ಟಿರುವ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕರು ರಾಜ್‌ಘಾಟ್‌ಗೆ ಭೇಟಿ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅಷ್ಟಲ್ಲದೆ, ಪಕ್ಷದ ಕಾರ್ಯಕರ್ತರು ಮಹಾತ್ಮ ಗಾಂಧಿ ಸ್ಮಾರಕವನ್ನು ಗಂಗಾ ಜಲದಿಂದ ಶುದ್ಧೀಕರಿಸಲಿದ್ದಾರೆ ಎಂದೂ ಹೇಳಿದೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, 'ಸರ್ಕಾರದ ಅಬಕಾರಿ ನೀತಿಯ ಬಗ್ಗೆ ಸ್ಪಷ್ಟನೆ ನೀಡುವಂತೆ ನಾವು ಎಎಪಿಯನ್ನು ನಿರಂತರವಾಗಿ ಕೇಳುತ್ತಿದ್ದೇವೆ. ಆದರೆ, ಅರವಿಂದ ಕೇಜ್ರಿವಾಲ್‌ ನೇತೃತ್ವದ ಸರ್ಕಾರವು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಾಧ್ಯವಿರುವ ಎಲ್ಲ ತಂತ್ರಗಳನ್ನೂ ಪ್ರಯೋಗಿಸುತ್ತಿದೆ' ಎಂದು ಆರೋಪಿಸಿದ್ದಾರೆ.

'ಅವರು (ಎಎಪಿ ನಾಯಕರು) ಮಹಾತ್ಮ ಗಾಂಧಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದರೆ, ಪಾಪ ಕೃತ್ಯದಲ್ಲಿ ಖಂಡಿತವಾಗಿಯೂ ಭಾಗಿಯಾಗಿದ್ದಾರೆ ಎಂದರ್ಥ. ಹೀಗಾಗಿ ಅದನ್ನು ಶುದ್ಧೀಕರಿಸಲು ಬಿಜೆಪಿ ಕಾರ್ಯಕರ್ತರು ಗಂಗಾ ಜಲ ಪ್ರೋಕ್ಷಣೆ ಮಾಡಲಿದ್ದಾರೆ' ಎಂದು ಹೇಳಿದ್ದಾರೆ.

ADVERTISEMENT

ಮುಂದುವರಿದು, ಅಬಕಾರಿ ನೀತಿಗೆ ಸಂಬಂಧಿಸಿದಂತೆ ಬಿಜೆಪಿಯು ತೀಕ್ಷ್ಣವಾದ ಪ್ರಶ್ನೆಗಳನ್ನು ಕೇಳುತ್ತಿದೆಯಾದರೂ, ಎಎಪಿಯು ನುಣುಚಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

ಎಎಪಿ ತೊರೆದು ಬಿಜೆಪಿ ಸೇರಿದರೆ ತಲಾ ₹ 20 ಕೋಟಿಯಂತೆ, ₹ 800 ಕೋಟಿ ನೀಡುವುದಾಗಿ ನಮ್ಮ 40 ಶಾಸಕರಿಗೆ ಆಮಿಷ ಒಡ್ಡಲಾಗಿದೆ ಎಂದು ಎಎಪಿಯ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆರೋಪಿಸಿದ್ದರು.

ಬಿಜೆಪಿ ಆಮಿಷದ ಕುರಿತು ಎಎಪಿಯ ಎಲ್ಲ ಶಾಸಕರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಕೇಜ್ರಿವಾಲ್ ತಮ್ಮ ನಿವಾಸದಲ್ಲಿ ಇಂದು (ಗುರುವಾರ) ಸಭೆ ನಡೆಸಿದರು. ಸಭೆ ಬಳಿಕ ಎಲ್ಲರೊಂದಿಗೆ ರಾಜ್‌ಘಾಟ್‌ಗೆ ತೆರಳಿ ಬಿಜೆಪಿಯ 'ಆಪರೇಷನ್‌ ಕಮಲ' ವಿಫಲವಾಗಲಿ ಎಂದು ಪ್ರಾರ್ಥಿಸಿದ್ದರು.

ಜನರು 'ಅತ್ಯಂತ ಪ್ರಮಾಣಿಕ' ಸರ್ಕಾರವನ್ನು ದೆಹಲಿಯಲ್ಲಿ ಆಯ್ಕೆ ಮಾಡಿದ್ದಾರೆ. ಅವರಿಗೆ ದ್ರೋಹ ಬಗೆಯುವುದಿಲ್ಲ ಎಂದೂ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.