ರೇವಂತ್ ರೆಡ್ಡಿ ಭೇಟಿಯಾದ ನಟ ಅಜಯ್ ದೇವಗನ್
(ಚಿತ್ರ– @revanth_anumula)
ಬಾಲಿವುಡ್ ನಟ ಅಜಯ್ ದೇವಗನ್ ಅವರು ಸೋಮವಾರ(ಜುಲೈ 7) ನವದೆಹಲಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ರಾಜ್ಯದಲ್ಲಿ (ತೆಲಂಗಾಣ) ವಿಶ್ವ ದರ್ಜೆಯ ಚಲನಚಿತ್ರ ಸ್ಟುಡಿಯೊ ಸ್ಥಾಪಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ 'ಎನ್ಡಿಟಿವಿ' ವರದಿ ಮಾಡಿದೆ.
ಅತ್ಯಾಧುನಿಕ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್ (VFX) ಮತ್ತು ಎಐ ಚಾಲಿತ ಸ್ಮಾರ್ಟ್ ಸ್ಟುಡಿಯೊ ಸೌಲಭ್ಯಗಳನ್ನು ಒಳಗೊಂಡಿರುವ ಅಂತರರಾಷ್ಟ್ರೀಯ ಗುಣಮಟ್ಟದ ಚಲನಚಿತ್ರ ಸ್ಟುಡಿಯೊ ನಿರ್ಮಿಸುವ ಪ್ರಸ್ತಾಪವನ್ನು ಅವರು ಸಿಎಂ ಮುಂದೆ ಇಟ್ಟಿದ್ದಾರೆ.
ಅಲ್ಲದೇ, ವಿವಿಧ ಕ್ಷೇತ್ರಗಳಲ್ಲಿ ವೃತ್ತಿಪರರಿಗೆ ತರಬೇತಿ ನೀಡಲು ಕೌಶಲ್ಯ ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಅಗತ್ಯವಾದ ಸರ್ಕಾರದ ಬೆಂಬಲಕ್ಕಾಗಿ ದೇವಗನ್, ರೇವಂತ್ ರೆಡ್ಡಿ ಅವರಲ್ಲಿ ಮನವಿ ಮಾಡಿದ್ದಾರೆ.
ಮಾಧ್ಯಮ ಮತ್ತು ಮನರಂಜನೆ ಸೇರಿದಂತೆ ಹಲವು ವಲಯಗಳಲ್ಲಿ ತೆಲಂಗಾಣ ಸರ್ಕಾರ ಕೈಗೊಂಡಿರುವ ಸಮಗ್ರ ಅಭಿವೃದ್ಧಿ ಉಪಕ್ರಮಗಳ ಕುರಿತು ಮುಖ್ಯಮಂತ್ರಿ ರೆಡ್ಡಿ, ದೇವಗನ್ ಅವರಿಗೆ ವಿವರಿಸಿದ್ದಾರೆ.
ರಾಜ್ಯದ ಪ್ರಗತಿಪರ ವಿಧಾನವನ್ನು ಶ್ಲಾಘಿಸಿದ ದೇವಗನ್, ‘ರೈಸಿಂಗ್ ತೆಲಂಗಾಣ‘ ಪರಿಕಲ್ಪನೆಯನ್ನು ಉತ್ತೇಜಿಸಲು ಸಿನಿಮಾ ಮತ್ತು ಮಾಧ್ಯಮವನ್ನು ಬಳಸಿಕೊಳ್ಳುವ ಮೂಲಕ ಬ್ರಾಂಡ್ ರಾಯಭಾರಿಯಾಗಿ ಸೇವೆ ಸಲ್ಲಿಸಲು ಬದ್ಧರಾಗಿರುವುದಾಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.