ಕೋಲ್ಕತ್ತ: ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಸಂಘಟಿತವಾಗಿ ಹೋರಾಟ ನಡೆಸಲು ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ನಿರ್ಧರಿಸಿವೆ. ಕಾಂಗ್ರೆಸ್ನ ಜೊತೆಗೆ ಅಂತರ ಕಾಯ್ದುಕೊಳ್ಳಲು ತೀರ್ಮಾನಿಸಿವೆ.
ಶುಕ್ರವಾರ ಒಂದು ಗಂಟೆ ಕಾಲ ಪ್ರತ್ಯೇಕವಾಗಿ ಇಲ್ಲಿ ಸಭೆ ನಡೆಸಿದ ತೃಣಮೂಲ ಕಾಂಗ್ರೆಸ್ನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಈ ಕುರಿತ ನಿರ್ಧಾರವನ್ನು ಕೈಗೊಂಡಿದ್ದಾರೆ.
ಸಭೆಯ ನಂತರ ಈ ವಿಷಯ ತಿಳಿಸಿದ ಸಮಾಜವಾದಿ ಪಕ್ಷದ ನಾಯಕ ಕಿರಣ್ಮಯಿ ನಂದಾ ಅವರು, ವಿವಿಧ ಪ್ರಾದೇಶಿಕ ಪಕ್ಷಗಲು ಬರುವ ದಿನಗಳಲ್ಲಿ ತಮ್ಮ ಕಾರ್ಯಶೈಲಿಯನ್ನು ಅಂತಿಮಗೊಳಿಸಲಿವೆ ಎಂದು ಹೇಳಿದರು.
ಮಮತಾ ಬ್ಯಾನರ್ಜಿ ಅವರೊಂದಿಗೆ ಸೌಹಾರ್ದ ಬಾಂಧವ್ಯವಿದೆ. ಸಹಜವಾಗೇ ಇಬ್ಬರೂ ಮುಖಂಡರ ಭೇಟಿಯಲ್ಲಿ ದೇಶದ ಪ್ರಸ್ತುತದ ರಾಜಕೀಯ ಪರಿಸ್ಥಿತಿ ಕುರಿತು ಚರ್ಚೆಯಾಯಿತು ಎಂದು ತಿಳಿಸಿದರು.
ವಿರೋಧಪಕ್ಷಗಳ ಒಕ್ಕೂಟದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಕುರಿತು ಗಮನಸೆಳೆದಾಗ, ಪ್ರಾದೇಶಿಕ ಪಕ್ಷಗಳು ತಮ್ಮ ಪಾತ್ರ ಕುರಿತು ನಿರ್ಧಾರ ಕೈಗೊಳ್ಳಲು ಸಮರ್ಥವಾಗಿವೆ. ತನ್ನ ಪಾತ್ರ ಕುರಿತಂತೆ ಕಾಂಗ್ರೆಸ್ ಪಕ್ಷವೇ ತೀರ್ಮಾನಿಸಲಿದೆ. ಬಿಜೆಪಿ ವಿರುದ್ಧದ ಹೋರಾಟಕ್ಕೆ ಧಕ್ಕೆಯಾಗುವಂತೆ ಯಾರೊಬ್ಬರೂ ಪ್ರತಿಕೂಲ ನಿರ್ಧಾರ ಕೈಗೊಳ್ಳಬಾರದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.