ADVERTISEMENT

ಸಿಲ್ಕ್ಯಾರಾ ಸುರಂಗ ಕುಸಿತ: 17 ದಿನಗಳ ನಂತರ 41 ಕಾರ್ಮಿಕರ ರಕ್ಷಣೆ ಯಶಸ್ವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ನವೆಂಬರ್ 2023, 15:44 IST
Last Updated 28 ನವೆಂಬರ್ 2023, 15:44 IST
<div class="paragraphs"><p>ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಿಂದ ಸುರಕ್ಷಿತವಾಗಿ ಹೊರಬಂದ ಕಾರ್ಮಿಕನಿಗೆ ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಮಾಲೆ ಹಾಕಿ ಬರಮಾಡಿಕೊಂಡರು</p></div>

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಿಂದ ಸುರಕ್ಷಿತವಾಗಿ ಹೊರಬಂದ ಕಾರ್ಮಿಕನಿಗೆ ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಮಾಲೆ ಹಾಕಿ ಬರಮಾಡಿಕೊಂಡರು

   

ಪಿಟಿಐ ಚಿತ್ರ

ಉತ್ತರಕಾಶಿ: ಚಾರ್‌ಧಾಮ್‌ ಸರ್ವ ಋತು ಹೆದ್ದಾರಿಯಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿದ್ದ 41 ಕಾರ್ಮಿಕರು 17 ದಿನಗಳ ನಂತರ ಸುರಕ್ಷಿತವಾಗಿ ಹೊರಬಂದಿದ್ದಾರೆ. ಆ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದ ದುರಂತವೊಂದು ಸುಖಾಂತ್ಯ ಕಂಡಿದೆ.

ADVERTISEMENT

ಪ್ರಧಾನಮಂತ್ರಿ ಕಾರ್ಯಾಲಯದ ನಿಗಾದಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಹಾಗೂ ವಿದೇಶದ ಸುರಂಗ ತಂತ್ರಜ್ಞರೂ ಪಾಲ್ಗೊಂಡಿದ್ದರು. ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಹೊರತರುವ ರಕ್ಷಣಾ ಕಾರ್ಯಾಚರಣೆಯಲ್ಲಿ ದೈತ್ಯ ಯಂತ್ರಗಳನ್ನೂ ಬಳಸಲಾಗಿತ್ತು. ಆದರೆ ಅವುಗಳು ನಿಷ್ಕ್ರಿಯಗೊಂಡ ನಂತರ ಭರವಸೆ ಕ್ಷೀಣಿಸಿತ್ತು.

ಆದರೆ ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ (ಇಲಿ ಬಿಲ) ತಂತ್ರಜ್ಞಾನ ಬಳಸಲು ನಿರ್ಧರಿಸಿಲಾಯಿತು. 12 ಜನ ಇಲಿ ಬಿಲ ಕೊರೆಯುವ ತಂತ್ರಜ್ಞರ ತಂಡ ಸುರಂಗಕ್ಕೆ 2 ಅಡಿ ಅಗಲದ ಸುರಂಗವನ್ನು ಕೆಲವೇ ಗಂಟೆಗಳಲ್ಲಿ ಕೊರೆದು ಮುಗಿಸಿತು. ಅದಕ್ಕೆ ಮಂಗಳವಾರ ಸಂಜೆ 7ರ ಹೊತ್ತಿಗೆ ಕೊಳವೆ ಅಳವಡಿಸುವ ಕಾರ್ಯ ನಡೆಸಲಾಯಿತು.

ಅಂತಿಮವಾಗಿ ಕೊಳವೆಯೊಳಗೆ ಸ್ಟ್ರೆಚರ್‌ ಬಳಸಿ ರಾತ್ರಿ 8ಕ್ಕೆ ಮೊದಲ ಕಾರ್ಮಿಕನನ್ನು ಸುರಕ್ಷಿತವಾಗಿ ಹೊರತರುವಲ್ಲಿ ಕೇಂದ್ರ ಹಾಗು ರಾಜ್ಯ ವಿಪತ್ತು ನಿರ್ವಹಣಾ ತಂಡ ಸಫಲವಾಯಿತು. ನಂತರ ಒಬ್ಬರ ಹಿಂದೊಬ್ಬರಂತೆ ಕಾರ್ಮಿಕರು ಹೊರಬಂದರು. ಸ್ಥಳಕ್ಕೆ ಭೇಟಿ ನೀಡಿದ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆರೋಗ್ಯ ವಿಚಾರಿಸಿ ಸಂಭ್ರಮಿಸಿದರು. ಸ್ಥಳೀಯರು ಸಿಹಿ ಹಂಚ ಹರ್ಷ ವ್ಯಕ್ತಪಡಿಸಿದರು.

ಸುರಕ್ಷಿತವಾಗಿ ಹೊರ ಬಂದ ಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಅವರನ್ನು ಕರೆದೊಯ್ಯಲು ಆಂಬುಲೆನ್ಸ್‌ಗಳು ಕಾದು ನಿಂತಿದ್ದವು. ಸುರಂಗದೊಳಗೆ ಹೋದ ಆಂಬುಲೆನ್ಸ್‌ಗಳು ಕೊಳವೆಯಿಂದ ಹೊರಬರುತ್ತಿದ್ದ ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಹೊತ್ತೊಯ್ದವು.

ಕಾರ್ಮಿಕರ ಚಿಕಿತ್ಸೆಗಾಗಿ ಉತ್ತರಕಾಶಿ ಜಿಲ್ಲೆಯಲ್ಲೇ ಪ್ರತ್ಯೇಕ ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ. ಏಮ್ಸ್‌ನ ತಜ್ಞ ವೈದ್ಯರ ತಂಡವೇ ಇಲ್ಲಿ ಬೀಡು ಬಿಟ್ಟಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ತಕ್ಷಣ ಕಾರ್ಮಿಕರನ್ನು ಸಾಗಿಸಲು ಸೇನೆಯ ಹೆಲಿಕಾಪ್ಟರ್ ಸ್ಥಳದಲ್ಲೇ ಬೀಡು ಬಿಟ್ಟಿತ್ತು. 

ಸುರಂಗದ ಹೊರಗೆ ಸಂಭ್ರಮವೇ ಮನೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.