ನವದೆಹಲಿ: 14 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಬಾಧೆ ಕಡಿಮೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದರು.
'ಮಕ್ಕಳಿಗೆ ಸೋಂಕು ಉಂಟಾಗುವ ಸಾಧ್ಯತೆಗಳು ತೀರ ವಿರಳ. ಒಂದು ವೇಳೆ ಸೋಂಕಿತರಾದರೂ ಅವರು ಲಕ್ಷಣರಹಿತರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ. ಆದ್ದರಿಂದ ಅಂತಹ ಮಕ್ಕಳ ಮೇಲಿನ ಕೋವಿಡ್ ದುಷ್ಪರಿಣಾಮಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಸ್ತುತ ಯಾವುದೇ ನಿರ್ದಿಷ್ಟ ಕ್ರಿಯಾ ಯೋಜನೆಯನ್ನು ಸರ್ಕಾರ ರೂಪಿಸಿಲ್ಲ,' ಎಂದು ಅವರು ತಿಳಿಸಿದರು.
'ತೀರ ವಿರಳ ಪ್ರಕರಣಗಳಲ್ಲಿ ತೀವ್ರವಾದ ಅನಾರೋಗ್ಯವನ್ನು ಗುರುತಿಸಲಾಗಿದೆ. ಇದು ಸಾಮಾನ್ಯವಾಗಿ ಸೋಂಕು ತಗುಲಿ ಮೂರರಿಂದ ಆರು ವಾರಗಳ ನಂತರ ಸಂಭವಿಸುತ್ತದೆ,' ಎಂದು ಹರ್ಷವರ್ಧನ್ ಹೇಳಿದರು.
'ಮಕ್ಕಳಲ್ಲಿ ಕೋವಿಡ್-19 ಸೋಂಕಿನ ದೀರ್ಘಕಾಲೀನ ಪರಿಣಾಮವನ್ನು ಏಮ್ಸ್ನ ಮಕ್ಕಳ ವಿಭಾಗ ದಾಖಲಿಸುತ್ತಿದೆ,' ಎಂದೂ ಅವರು ತಿಳಿಸಿದರು.
'0-14 ವರ್ಷ ವಯಸ್ಸಿನ ಮಕ್ಕಳ ಮೇಲಿನ ಕೋವಿಡ್ 19 ದುಷ್ಪರಿಣಾಮಗಳನ್ನು ನಿಯಂತ್ರಿಸಲು ಮತ್ತು ಕಡಿಮೆ ಮಾಡಲು ಸರ್ಕಾರ ಯಾವುದಾದರೂ ಕ್ರಿಯಾ ಯೋಜನೆ ರೂಪಿಸಿದೆಯೇ,' ಎಂಬ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.