ADVERTISEMENT

ಆಂಧ್ರ ಪ್ರದೇಶ: ಸೆಪ್ಟೆಂಬರ್‌ 5ರಿಂದ ಶಾಲೆ ಪುನರಾರಂಭ

ಕೋವಿಡ್–19

ಏಜೆನ್ಸೀಸ್
Published 22 ಜುಲೈ 2020, 1:50 IST
Last Updated 22 ಜುಲೈ 2020, 1:50 IST
ಶಾಲೆಗಳ ಪುನರಾರಂಭ–ಪ್ರಾತಿನಿಧಿಕ ಚಿತ್ರ
ಶಾಲೆಗಳ ಪುನರಾರಂಭ–ಪ್ರಾತಿನಿಧಿಕ ಚಿತ್ರ   

ಅಮರಾವತಿ: ಆಂಧ್ರ ಪ್ರದೇಶ ಸರ್ಕಾರ ಶಾಲೆ ಪುನರಾರಂಭಿಸುವ ಬಗ್ಗೆ ನಿರ್ಧಾರ ಕೈಗೊಂಡಿದೆ. ಸೆಪ್ಟೆಂಬರ್‌ 5ರಿಂದ ಶಾಲೆಗಳನ್ನು ತೆರೆಯುವ ಯೋಜನೆ ಹಾಕಿಕೊಂಡಿದೆ.

ಕೋವಿಡ್‌ ಸಾಂಕ್ರಾಮಿಕದ ನಡುವೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ವೈ.ಎಸ್.ಜಗನ್‌ ಮೋಹನ್ ರೆಡ್ಡಿ, ಶಿಕ್ಷಣ ಸಚಿವ ಆದಿಮುಲಪು ಸುರೇಶ್‌ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಸೆಪ್ಟೆಂಬರ್‌ 5ರಿಂದ ಶಾಲೆ ತೆರೆಯಲು ನಿರ್ಧಾರಿಸಲಾಗಿದ್ದರೂ ಅಂತಿಮ ನಿರ್ಧಾರ ವಾಸ್ತವ ಸ್ಥಿತಿಯನ್ನೇ ಆಧರಿಸಿರುತ್ತದೆ ಎಂದು ಸಚಿವ ಸುರೇಶ್‌ ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಶಾಲೆ ಮತ್ತೆ ಆರಂಭವಾಗುವವರೆಗೂ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟಕ್ಕೆ ಬದಲು ಅವರ ಮನೆಗಳಿಗೇ ದವಸ, ಧಾನ್ಯ ತಲುಪಿಸಲಾಗುತ್ತದೆ ಎಂದಿದ್ದಾರೆ.

ADVERTISEMENT

ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣ ಆರಂಭಿಸಲಾಗುತ್ತದೆ. ಜೆಇಇ, ಐಐಐಟಿ, ಎಪಿ ಇಎಂಸಿಇಟಿ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರಿ ಜೂನಿಯರ್‌ ಕಾಲೇಜುಗಳಲ್ಲಿ ತರಬೇತಿ ಸಹ ನಡೆಸಲಾಗುತ್ತದೆ ಎಂದು ಮುಂದಿನ ಯೋಜನೆಗಳನ್ನು ತೆರೆದಿಟ್ಟಿದ್ದಾರೆ.

ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಜಿಲ್ಲಾ ಮಟ್ಟದಲ್ಲಿ ಜಂಟಿ ನಿರ್ದೇಶಕರ ಹುದ್ದೆಯನ್ನು ರಚಿಸಲಾಗುತ್ತಿದೆ. 'ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಜಾರಿಗೆ ತರುವುದು ಹಾಗೂ ಮಧ್ಯಾಹ್ನದ ಊಟ (ಜಗನನ್ನ ಗೋರುಮುದ್ದ) ಯೋಜನೆಯ ಅನುಷ್ಠಾನಗಳನ್ನು ನಿರ್ವಹಿಸಲು ರಾಜ್ಯ ಮಟ್ಟದಲ್ಲಿ ಎರಡು ನಿರ್ದೇಶಕರ ಸಮಾನಾಂತರ ಹುದ್ದೆಗಳನ್ನು ಸೃಷ್ಟಿಸಲು ಮುಖ್ಯಮಂತ್ರಿ ಆದೇಶಿಸಿದ್ದಾರೆ. ಹಾಗೇ ರಾಜ್ಯದ ಪ್ರತಿ ಮಂಡಲದಲ್ಲಿಯೂ ಸರ್ಕಾರಿ ಜೂನಿಯರ್‌ ಕಾಲೇಜು ತೆರೆಯಲು ನಿರ್ದೇಶಿಸಿರುವುದಾಗಿ' ಸುರೇಶ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.