ADVERTISEMENT

ಲಡಾಖ್: ಗಡಿಗೆ ಭೇಟಿ ನೀಡಿ ಯೋಧರನ್ನು ಶ್ಲಾಘಿಸಿದ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ

ಏಜೆನ್ಸೀಸ್
Published 24 ಜೂನ್ 2020, 7:44 IST
Last Updated 24 ಜೂನ್ 2020, 7:44 IST
ಚೀನಾ ಗಡಿಯಲ್ಲಿ ಯೋಧರ ಜತೆ ಮಾತುಕತೆ ನಡೆಸುತ್ತಿರುವ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ –ಎಎನ್‌ಐ ಚಿತ್ರ
ಚೀನಾ ಗಡಿಯಲ್ಲಿ ಯೋಧರ ಜತೆ ಮಾತುಕತೆ ನಡೆಸುತ್ತಿರುವ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ –ಎಎನ್‌ಐ ಚಿತ್ರ   

ಲಡಾಖ್: ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಅವರು ಬುಧವಾರ ಪೂರ್ವ ಲಡಾಖ್‌ನ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿ ಯೋಧರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು, ಯೋಧರ ಸಾಹಸವನ್ನು ಶ್ಲಾಘಿಸಿದ್ದಾರೆ.

ಯೋಧರ ಮನೋಸ್ಥೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸೇನಾ ಮುಖ್ಯಸ್ಥರು, ಮುಂದೆಯೂ ಉತ್ಸಾಹ ಮತ್ತು ಹುಮ್ಮಸ್ಸಿನೊಂದಿಗೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು ಎಂದು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಚೀನಾ ಜತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕಿಸಲು ನರವಣೆ ಅವರುಲಡಾಖ್‌ಗೆ ಮೂರು ದಿನಗಳ ಭೇಟಿ ಕೈಗೊಂಡಿದ್ದಾರೆ. ಮಂಗಳವಾರ ಲೇಹ್‌ಗೆ ಭೇಟಿ ನೀಡಿದ್ದ ಅವರು, ಚೀನಾ ಸೇನೆ ಜತೆಗಿನ ಮಾತುಕತೆಯ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು ಮತ್ತು ತಳಮಟ್ಟದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ಅವಲೋಕಿಸಿದ್ದರು. ಲಡಾಖ್‌ ಸಂಸದ ಜಮ್‌ಯಾಂಗ್ ಟ್ಸೆರಿಂಗ್ ನಮ್‌ಯಾಂಗ್ ಜತೆಗೂ ಮಾತುಕತೆ ನಡೆಸಿದ್ದರು. ಜೂನ್ 15ರಂದು ಚೀನಾ ಪಡೆಗಳ ಜತೆಗಿನ ಸಂಘರ್ಷದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಯೋಧರಿರುವ ಆಸ್ಪತ್ರೆಗೂ ಭೇಟಿ ನೀಡಿದ್ದ ಅವರು ಯೋಧರ ಜತೆ ಮಾತುಕತೆ ನಡೆಸಿದ್ದರು.

ADVERTISEMENT

ಈ ಮಧ್ಯೆ, ಗಡಿ ಪ್ರದೇಶದಲ್ಲಿನ ಉದ್ವಿಗ್ನತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತ–ಚೀನಾ ನಡುವಣ ಸೇನಾ ಮಟ್ಟದ ಮಾತುಕತೆ ಮುಂದುವರಿದಿದೆ.

ಇನ್ನಷ್ಟು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.