ADVERTISEMENT

ಗುಜರಾತ್‌ನಲ್ಲಿ ಪಂಜಾಬ್‌ ಸರ್ಕಾರದ ದುಡ್ಡು ವ್ಯಯಿಸುತ್ತಿರುವ ಎಎಪಿ: ಕಾಂಗ್ರೆಸ್‌

ಪಿಟಿಐ
Published 13 ಸೆಪ್ಟೆಂಬರ್ 2022, 11:09 IST
Last Updated 13 ಸೆಪ್ಟೆಂಬರ್ 2022, 11:09 IST
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ | ಪಿಟಿಐ ಚಿತ್ರ
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ | ಪಿಟಿಐ ಚಿತ್ರ   

ನವದೆಹಲಿ: ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ ಪಂಜಾಬ್‌ ಸರ್ಕಾರದ ದುಡ್ಡನ್ನು ವ್ಯಯಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದ್ದು, 'ಎಎಪಿ ಎಂಬುದು ಅರವಿಂದ ಅಡ್ವರ್‌ಟೈಸ್‌ಮೆಂಟ್‌ ಪಾರ್ಟಿ' ಎಂದು ಟೀಕಿಸಿದೆ.

ಪಂಜಾಬ್‌ನ ಮುಖ್ಯಮಂತ್ರಿ ಭಗವಂತ ಮಾನ್‌ ಅವರಿಗೆ ಅಲ್ಲಿನ ಸರ್ಕಾರಿ ನೌಕರರಿಗೆ ಮಾಸಿಕ ಸಂಬಳ ಕೊಡಲು ದುಡ್ಡಿಲ್ಲ. ಆದರೆ ಗುಜರಾತ್‌ನಲ್ಲಿ ಎರಡು ತಿಂಗಳಿಗೆ ಜಾಹೀರಾತಿಗಾಗಿ ₹ 36 ಕೋಟಿ ವ್ಯಯಿಸಲು ದುಡ್ಡಿದೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಮುಖಂಡ ಅಜಯ್‌ ಕುಮಾರ್‌, ಎಎಪಿ ಎಂಬುದನ್ನು ಅರವಿಂದ ಅಡ್ವರ್‌ಟೈಸ್‌ಮೆಂಟ್‌ ಪಾರ್ಟಿ ಮತ್ತು ಅರವಿಂದ ಆ್ಯಕ್ಟರ್ಸ್‌ ಪಾರ್ಟಿ, ಅರವಿಂದ್‌ ಐಶ್‌ ಪಾರ್ಟಿ (ಐಷಾರಾಮಿ) ಎಂದು ಕರೆಯುವುದು ಉತ್ತಮ ಎಂದಿದ್ದಾರೆ.

ADVERTISEMENT

ಆಮ್‌ ಆದ್ಮಿ ಪಾರ್ಟಿಯವರು 2015ರಲ್ಲಿ ದೆಹಲಿಯಲ್ಲಿ ಟಿವಿ ಮತ್ತು ಪತ್ರಿಕೆಗಳ ಜಾಹೀರಾತಿಗೆ ₹ 81 ಕೋಟಿ ವ್ಯಯಿಸಿದ್ದಾರೆ. 2017-18ರಲ್ಲಿ ₹ 117 ಕೋಟಿ, 2019ರಲ್ಲಿ ₹ 200 ಕೋಟಿ, 2021-22ರಲ್ಲಿ ₹ 490 ಕೋಟಿ ಖರ್ಚು ಮಾಡಲಾಗಿದೆ. ಕಾಂಗ್ರೆಸ್‌ ಸಿಎಂ ಶೀಲಾ ದೀಕ್ಷಿತ್‌ ಅವರ ಸರ್ಕಾರದಲ್ಲಿ ಜಾಹೀರಾತಿಗಾಗಿ ಕೇವಲ ₹ 11 ಕೋಟಿ ಮೀಸಲಿಟ್ಟಿತ್ತು ಎಂದಿದ್ದಾರೆ.

ವಿದ್ಯಾರ್ಥಿ ವೇತನ ಕುರಿತಾದ ಜಾಹೀರಾತಿಗೆ ದೆಹಲಿ ಸರ್ಕಾರ ₹ 19 ಕೋಟಿ ಖರ್ಚು ಮಾಡಿದೆ. ಆದರೆ ವಿದ್ಯಾರ್ಥಿ ವೇತನ ಸಿಕ್ಕಿದ್ದು ಕೇವಲ ಇಬ್ಬರು ವಿದ್ಯಾರ್ಥಿಗಳಿಗೆ. ಕೇಜ್ರಿವಾಲ್‌ ಅವರ ಯೋಜನೆಗಳು ತುಂಬ ಯಶಸ್ವಿಯಾದವುಗಳಾಗಿದ್ದರೆ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಏಕೆ? ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.