ಸುನಿತಾ ಕೇಜ್ರಿವಾಲ್ ಹಾಗೂ ಅರವಿಂದ ಕೇಜ್ರಿವಾಲ್
– ಪಿಟಿಐ ಚಿತ್ರಗಳು
ನವದೆಹಲಿ: ಪತ್ನಿ ಸುನಿತಾಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಭವಿಷ್ಯದಲ್ಲಿ ಅವರು ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನನ್ನ ಬದುಕಿನ ಪ್ರತಿಯೊಂದು ಹಂತದಲ್ಲೂ ಅವರು ನನಗೆ ಬೆಂಬಲ ನೀಡಿದ್ದಾರೆ. ಅವರಂಥ ಸಂಗಾತಿ ಸಿಗಲು ನಾನು ಅದೃಷ್ಟ ಮಾಡಿದ್ದೇನೆ. ನನ್ನಂಥ ವಿಚಿತ್ರ ವ್ಯಕ್ತಿಯನ್ನು ಸಹಿಸಿಕೊಳ್ಳುವುದು ಸುಲಭವಲ್ಲ’ ಎಂದು ಹೇಳಿದ್ದಾರೆ.
ತಮ್ಮ ಬದುಕಿನ ಗತಿಸಿಹೋದ ದಿನಗಳನ್ನು ಮೆಲುಕು ಹಾಕಿದ ಅವರು, ‘2000ನೇ ಇಸವಿಯಲ್ಲಿ ಆದಾಯ ತೆರಿಗೆ ಆಯುಕ್ತನಾಗಿದ್ದಾಗ ದೆಹಲಿಯ ಕೊಳಗೇರಿಗಳಲ್ಲಿ ಕೆಲಸ ಮಾಡಲು ರಜೆ ಹಾಕಿದ್ದೆ. ಬಳಿಕ ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣಾವಧಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡೆ’ ಎಂದಿದ್ದಾರೆ.
‘ ಪಕ್ಷ ಕಟ್ಟುತ್ತೇನೆ, ಮುಖ್ಯಮಂತ್ರಿಯಾಗುತ್ತೇನೆ ಎಂದು ನಾನು ಆ ಸಮಯದಲ್ಲಿ ಯೋಚಿಸಿಯೇ ಇರಲಿಲ್ಲ. ನಾನು 10 ವರ್ಷ ಕೆಲಸ ಮಾಡಿದೆ. ಈ ವೇಳೆ ಕೂಡ ಪತ್ನಿ ನನಗೆ ಬೆಂಬಲ ನೀಡಿದರು. ಆ ವೇಳೆ ಅವರು ಎಷ್ಟೆಲ್ಲಾ ಕಷ್ಟ ಅನುಭವಿಸಿರಬಹುದು ಊಹಿಸಿ’ ಎಂದು ಹೇಳಿದ್ದಾರೆ.
‘ನಾನು ಜೈಲಿನಲ್ಲಿದ್ದಾಗ ನನ್ನ ಮತ್ತು ದೆಹಲಿ ಜನರ ಮಧ್ಯೆ ಅವರು ಕೊಂಡಿಯಾಗಿದ್ದರು. ಅದು ತಾತ್ಕಾಲಿಕವಷ್ಟೇ. ಅವರಿಗೆ ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ಭವಿಷ್ಯದಲ್ಲಿಯೂ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ’ ಎಂದು ಹೇಳಿದ್ದಾರೆ.
ನನ್ನ ಪತ್ನಿ ಗಟ್ಟಿ ಹಾಗೂ ವೀರ ಮಹಿಳೆ ಎಂದು ಕೊಂಡಾಡಿದ ಅವರು, ಇಬ್ಬರು ಮಕ್ಕಳು ಕೂಡ ಅದೇ ರೀತಿ ಎಂದು ಪ್ರಶಂಸಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.