ADVERTISEMENT

ರಾಜಸ್ಥಾನ: ಮೂರನೇ ಬಾರಿಗೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 5:54 IST
Last Updated 17 ಡಿಸೆಂಬರ್ 2018, 5:54 IST
   

ಗಾಂಧಿ–ನೆಹರೂ ಕುಟುಂಬದ ನಿಷ್ಠಾವಂತ ಎಂದು ಗುರುತಿಸಿಕೊಂಡಿರುವ ಅಶೋಕ್ ಗೆಹ್ಲೋಟ್‌(67) ಮೂರನೇ ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ್ದಾರೆ.

1998ರಲ್ಲಿ ಮೊದಲ ಬಾರಿಗೆ ಗೆಹ್ಲೋಟ್‌ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅದಾದ ನಂತರ 2008ರಲ್ಲಿ ಎರಡನೇ ಬಾರಿಗೆ ಮತ್ತೊಮ್ಮೆ ಅವರನ್ನು ಅದೃಷ್ಟ ಹುಡುಕಿಕೊಂಡು ಬಂದಿತ್ತು. ಈಗ 2018ರಲ್ಲಿ ಮೂರನೇ ಬಾರಿ ಮುಖ್ಯಮಂತ್ರಿ ಹುದ್ದೆ ಏರಿದ್ದಾರೆ. ಜೋಧಪುರದ ಸರ್ದಾರ್‌ಪುರ ವಿಧಾನಸಭಾ ಕ್ಷೇತ್ರದಿಂದ ಗೆಹ್ಲೋಟ್‌ ಸ್ಪರ್ಧಿಸಿದ್ದರು.

ವಿಜ್ಞಾನ ಮತ್ತು ಕಾನೂನು ಪದವೀಧರರಾದ ಗೆಹ್ಲೋಟ್‌ ಆರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಲಿ ಜನಾಂಗಕ್ಕೆ ಸೆರಿದ ಗೆಹ್ಲೋಟ್‌ ಮುಖ್ಯಮಂತ್ರಿಯಾಗಲು ರಾಜಸ್ಥಾನದ ಪ್ರಬಲ ಜಾಟ್‌ ಸಮುದಾಯದ ನಾಯಕರು ಬಹಿರಂಗವಾಗಿ ಅಡ್ಡಗಾಲು ಹಾಕಿದರು. ಜತೆಗೆ ಈ ಬಾರಿ ಸಚಿನ್‌ ಪೈಲಟ್‌ ಅವರಿಗೆ ಅವಕಾಶ ನೀಡುವಂತೆ ಗುಜ್ಜರ್‌ ಸಮುದಾಯದವರು ಕೂಡ ರಸ್ತೆಗಿಳಿದಿದ್ದರು.

ADVERTISEMENT

ಮಾಲಿ ಜನಾಂಗಕ್ಕೆ ಸೆರಿದ ಗೆಹ್ಲೋಟ್‌ ಮುಖ್ಯಮಂತ್ರಿಯಾಗಲು ರಾಜಸ್ಥಾನದ ಪ್ರಬಲ ಜಾಟ್‌ ಸಮುದಾಯದ ನಾಯಕರು ಬಹಿರಂಗವಾಗಿ ಅಡ್ಡಗಾಲು ಹಾಕಿದರು. ಜತೆಗೆ ಈ ಬಾರಿ ಸಚಿನ್‌ ಪೈಲಟ್‌ ಅವರಿಗೆ ಅವಕಾಶ ನೀಡುವಂತೆ ಗುಜ್ಜರ್‌ ಸಮುದಾಯದವರು ಕೂಡ ರಸ್ತೆಗಿಳಿದಿದ್ದರು.

ಗೆಹ್ಲೋಟ್‌ ಜಾದೂಗಾರರರ ಕುಟುಂಬದಿಂದ ಬಂದವರು. ಬಾಲ್ಯದಲ್ಲಿ ತಂದೆ ಲಚಮನ್‌ ಸಿಂಗ್‌ ಜತೆ ಊರೂರು ತಿರುಗಿ ಜಾದೂ ಪ್ರದರ್ಶನ ನೀಡುತ್ತಿದ್ದರು. ಇದರಿಂದಾಗಿಯೇ ರಾಜಕೀಯ ವಿರೋಧಿಗಳು ಅವರನ್ನು‘ಗಿಲ್ಲಿ ಬಿಲ್ಲಿ’ ಎಂದು ಛೇಡಿಸುತ್ತಾರೆ.

ಪೂರ್ವ ಬಂಗಾಳ ನಿರಾಶ್ರಿತರ ನೆರವಿಗೆ ನಿಂತಿದ್ದ ಗೆಹ್ಲೋಟ್‌ ಕೆಲಸ ಮೆಚ್ಚಿಕೊಂಡಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಗೆಹ್ಲೋಟ್‌ ಅವರನ್ನು ರಾಜಕೀಯಕ್ಕೆ ಕರೆತಂದಿದ್ದರು. 1974ರಲ್ಲಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ)ಗೆಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.

ಯುವ ಕಾಂಗ್ರೆಸ್‌ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟ ಗೆಹ್ಲೋಟ್‌ ಸರಳ ಜೀವಿ. ವಿದ್ಯಾರ್ಥಿ ಜೀವನದಿಂದಲೂ ಮಹಾತ್ಮ ಗಾಂಧೀಜಿ ಅವರ ಆದರ್ಶಗಳಿಗೆ ಪ್ರಭಾವಿತರಾದ ಗೆಹ್ಲೋಟ್‌, ವಿದ್ಯಾರ್ಥಿ ದೆಸೆಯಲ್ಲಿ ಅನೇಕ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಳಲ್ಲಿ ಭಾಗಿಯಾದರು.

ಪಿ.ವಿ.ನರಸಿಂಹ ರಾವ್‌ ಹಾಗೂ ರಾಜೀವ್‌ ಗಾಂಧಿ ಅಧಿಕಾರವಧಿಯಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸದ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಗೆಹ್ಲೋಟ್‌ನಾಲ್ಕು ಬಾರಿ ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿ, ಐದು ಬಾರಿ ಲೋಕಸಭೆ ಮತ್ತು ಐದು ಬಾರಿ ವಿಧಾನಸಭೆ ಸದಸ್ಯರಾಗಿ ರಾಜಕಾರಣದಲ್ಲಿ ಅಪಾರ ಅನುಭವ ಗಳಿಸಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ರಚನೆಯಲ್ಲಿ ಗುಲಾಂ ನಬಿ ಆಜಾದ್‌ ಜತೆ ಗೆಹ್ಲೋಟ್‌ ಪ್ರಮುಖ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.