
ನವದೆಹಲಿ: ಡಿಜಿಟಲ್ ವೇದಿಕೆಗಳಲ್ಲಿರುವ ವಿಷಯಗಳ ಹೊಣೆಗಾರಿಕೆಯನ್ನು ಅವುಗಳೇ ಹೊರಬೇಕು. ಮಕ್ಕಳು ಹಾಗೂ ಡಿಜಿಟಲ್ ಬಳಕೆದಾರರ ಸುರಕ್ಷತೆಯು ಕೂಡ ಅವರದೇ ಹೊಣೆಯಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಡಿಜಿಟಲ್ ಸುದ್ದಿ ಪ್ರಕಾಶಕರ ಸಂಘದ (DNPA) ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.
ಡಿಜಿಟಲ್ ವೇದಿಕೆಗಳು ಎ.ಐ ಕಂಟೆಂಟ್ಗಳ ಕುರಿತು ಸ್ಪಷ್ಟ ನಿಯಮಗಳನ್ನು ತೆಗೆದುಕೊಳ್ಳಬೇಕಿದೆ. ಮೂಲ ವ್ಯಕ್ತಿಗಳ ಅನುಮತಿಯಿಲ್ಲದೆ ಅವರ ಚಹರೆ, ಧ್ವನಿಯನ್ನು ಉಪಯೋಗಿಸಬಾರದು. ಬಳಕೆದಾರರ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಅಂತರ್ಜಾಲ ಸುರಕ್ಷತೆ, ಸುಳ್ಳು ಸುದ್ದಿಗಳ ತಡೆಗಟ್ಟುವಿಕೆ, ನಕಲಿ ವಿಷಯಗಳ ಪ್ರಸಾರವನ್ನು ತಡೆಗಟ್ಟುವುದು ಡಿಜಿಟಲ್ ವೇದಿಕೆಗಳ ಕೆಲಸವಾಗಿದೆ ಎಂದು ಹೇಳಿದ್ದಾರೆ.
ಡಿಜಿಟಲ್ ವೇದಿಕೆಗಳಲ್ಲಿ ಬರಿ ಮಾಹಿತಿಗಳಷ್ಟೇ ಪ್ರಸಾರವಾಗುವುತ್ತಿಲ್ಲ. ಸುದ್ದಿಗಳಷ್ಟೇ ವೇಗವಾಗಿ ಸುಳ್ಳು ಸುದ್ದಿಗಳು ಕೂಡ ಹರಡುತ್ತಿವೆ. ನಾಗರಿಕರ ಡಿಜಿಟಲ್ ಸುರಕ್ಷತೆಯು ಇಂದಿನ ಅಗತ್ಯವಾಗಿದ್ದು, ಡಿಜಿಟಲ್ ವೇದಿಕೆಗಳು ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಎಲ್ಲಾ ಡಿಜಿಟಲ್ ವೇದಿಕೆಗಳು ನಿಮ್ಮ ನಿಯಮಗಳನ್ನು ಮತ್ತೊಮ್ಮೆ ಪರಿಶೀಲಿಸಿ. ತಪ್ಪು ಮಾಡಿದವರ ಕುರಿತು ನೀವು ವೈಯಕ್ತಿಕ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲರಾದರೆ, ಏನು ಮಾಡಬಹುದು ಅನ್ನುವುದನ್ನು ಬೇರೆ ದೇಶಗಳು ಈಗಾಗಲೇ ತೋರಿಸಿಕೊಟ್ಟಿವೆ ಎಂದು ಹೇಳಿದ್ದಾರೆ.
ಡಿಜಿಟಲ್ ವೇದಿಕೆಗಳು ಸುದ್ದಿ ಸಂಸ್ಥೆಗಳ ಜೊತೆಗೆ ವೈಯಕ್ತಿಕ ಕಂಟೆಟ್ ಕ್ರಿಯೇಟರ್ಸ್, ಇನ್ಫ್ಲುಯೆನ್ಸರ್ ಹಾಗೂ ಸಂಶೋಧಕರಿಗೂ ಕೂಡ ನ್ಯಾಯಯುತ ಆದಾಯ ಹಂಚಿಕೆಯನ್ನು ಖಚಿತಪಡಿಸಬೇಕು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.