
ಗುವಾಹಟಿ: ಬಹುಪತ್ನಿತ್ವ ನಿಷೇಧ ಮಸೂದೆಯನ್ನು ಅಸ್ಸಾಂ ವಿಧಾನಸಭೆ ಗುರುವಾರ ಅಂಗೀಕರಿಸಿದೆ.
ಬಹುಪತ್ನಿತ್ವವನ್ನು ಅಪರಾಧವೆಂದು ಪರಿಗಣಿಸಿ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನು ಮಸೂದೆಯಲ್ಲಿ ಕಲ್ಪಿಸಲಾಗಿದೆ. ಪರಿಶಿಷ್ಟ ಪಂಗಡ (ಎಸ್ಟಿ) ಮತ್ತು ಸಂವಿಧಾನದ ಆರನೆಯ ಪರಿಚ್ಛೇದದಡಿ ಬರುವ ಪ್ರದೇಶಗಳನ್ನು ಈ ಮಸೂದೆಯಿಂದ ಹೊರಗಿಡಲಾಗಿದೆ.
‘ಈ ಮಸೂದೆಯು ಇಸ್ಲಾಂಗೆ ವಿರುದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಮತ್ತು ಇತರೆ ಎಲ್ಲ ಸಮುದಾಯದವರು ಈ ಮಸೂದೆಯ ವ್ಯಾಪ್ತಿಯಡಿ ಬರಲಿದ್ದಾರೆ’ ಎಂದರು.
ಮತ್ತೆ ಸಿಎಂ ಆದರೆ ಯುಸಿಸಿ ಜಾರಿ: ಮುಂದಿನ ವರ್ಷ ನಡೆಯಲಿರುವ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾದರೆ, ಹೊಸ ಸರ್ಕಾರದ ಮೊದಲ ಅಧಿವೇಶನದಲ್ಲೇ ರಾಜ್ಯದಲ್ಲಿ ‘ಏಕರೂಪದ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸುವುದಾಗಿ ಹಿಮಂತ ಹೇಳಿದರು.
‘ವಂಚಿಸಿ ಮದುವೆಯಾಗುವರ ವಿರುದ್ಧದ ಮಸೂದೆಯನ್ನು ಫೆಬ್ರುವರಿ ಅಂತ್ಯದಲ್ಲಿ ನಡೆಯುವ ಅಧಿವೇಶನದಲ್ಲಿ ಮಂಡಿಸುವ ಯೋಜನೆ ಇದೆ. ಲವ್ ಜಿಹಾದ್ ಬಗ್ಗೆ ನಾವು ಏನು ಹೇಳಿದ್ದೇವೆಯೋ ಅದನ್ನು ಮಾಡುತ್ತೇವೆ’ ಎಂದು ಅವರು ಹೇಳಿದರು.
‘ಲವ್ ಜಿಹಾದ್ ನಿಷೇಧಿಸುತ್ತೇವೆ ಮತ್ತು ಇದರ ವಿರುದ್ಧ ಮಸೂದೆ ಜಾರಿಗೊಳಿಸುತ್ತೇವೆ ಎಂದು ಹಿಮಂತ ಬಿಸ್ವಾ ಶರ್ಮಾ ಇತ್ತೀಚೆಗೆ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.