ಶುಭಾಂಶು ಶುಕ್ಲಾ ಹಂಚಿಕೊಂಡ ವಿಡಿಯೊದಲ್ಲಿನ ದೃಶ್ಯ
ನವದೆಹಲಿ: ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ ಎನ್ನುವ ಬಗ್ಗೆ ಗಗನಯಾನಿ ಶುಭಾಂಶು ಶುಕ್ಲಾ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ವರ್ಷದ ಜೂನ್ನಲ್ಲಿ ಶುಕ್ಲಾ 18 ದಿನಗಳ ಬಾಹ್ಯಾಕಾಶ ಯಾನ ಕೈಗೊಂಡಿದ್ದರು. ಈ ವೇಳೆ ಬೆಳಕಿನ ಚಿತ್ತಾರದಲ್ಲಿ ಭಾರತ ಕಂಡ ಬಗೆಯನ್ನು ಕವಿಯಂತೆ ವಿವರಿಸಿದ್ದಾರೆ.
ಭಾರತವು ನೈಋತ್ಯದಿಂದ ಈಶಾನ್ಯಕ್ಕೆ ಒಂದು ನಕ್ಷತ್ರ ಪುಂಜದಂತೆ ಗೋಚರಿಸುತ್ತದೆ. ಬೆಂಗಳೂರು, ಹೈದರಾಬಾದ್, ಪುಣೆ ನಗರಗಳು ಆ ಪುಂಜದ ನಕ್ಷತ್ರಗಳು ಎಂದು ಬಣ್ಣಿಸಿದ್ದಾರೆ. ಇನ್ನೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿ ಮೃದುವಾಗಿ ಹೊಳೆಯುವ ಮೂಲಕ ತನ್ನ ಇರುವಿಕೆಯನ್ನು ತೋರಿಸುತ್ತದೆ. ಬಂಗಾಳಕೊಲ್ಲಿ ಮತ್ತು ಮಧ್ಯ ಭಾರತ ಬೆಳಕಿನ ಕಿರಣಗಳಲ್ಲಿ ಅದ್ಭುತವಾಗಿ ಕಾಣುತ್ತವೆ ಎಂದು ಬರೆದುಕೊಂಡಿದ್ದಾರೆ.
ಮೋಡಗಳ ನಡುವೆ ಘರ್ಜಿಸುವ ಸಿಡಿಲು, ಮಳೆಯ ಜಿನುಗು ಆಹ್ಲಾದವನ್ನು ನೀಡಿದರೆ, ಉತ್ತರಕ್ಕೆ ಸಾಗುತ್ತಿದ್ದಂತೆ ಬೆಳಕಿನ ತೇಜಸ್ಸು ಮೃದುವಾಗಿ ಮೌನವಾಗಿ, ಗಂಭೀರವಾಗಿ ಕುಳಿತ ಹಿಮಾಲಯ ಗೋಚರಿಸುತ್ತದೆ. ಇವೆಲ್ಲವನ್ನು ನೋಡಿದಾಗ ಪ್ರಕೃತಿಯಲ್ಲಿ ಮೂಡಿದ ಈ ವಿಸ್ಮಯದ ಕಲಾಕಾರ ಯಾರು ಎನ್ನುವ ಪ್ರಶ್ನೆ ಮೂಡುತ್ತದೆ. ಈ ಭವ್ಯ ದೃಶ್ಯವನ್ನು ನೋಡುವಾಗ ನಿಮ್ಮ ಮುಖದಲ್ಲಿ ನಸುನಗು ಬರದೇ ಇರಲು ಸಾಧ್ಯವಿಲ್ಲ. ಇದು ಭೂಮಿಯ ಮೇಲಿನ ದೀಪಾವಳಿಯಲ್ಲ, ಭೂಮಿಯ ದೀಪಾವಳಿ ಎಂದು ಎಲ್ಲರಿಗೂ ದೀಪಾವಳಿಯ ಶುಭಾಶಯ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.