ADVERTISEMENT

ಸಿಗದ ತಾಯಿ ಹುಲಿ: ತಿರುಪತಿ ವೆಂಕಟೇಶ್ವರ ಜೂ ಸೇರಿದ ನಾಲ್ಕು ಹುಲಿಮರಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮಾರ್ಚ್ 2023, 12:33 IST
Last Updated 11 ಮಾರ್ಚ್ 2023, 12:33 IST
ಜೂ ಸೇರಿರುವ ಹುಲಿಮರಿಗಳು
ಜೂ ಸೇರಿರುವ ಹುಲಿಮರಿಗಳು   

ತಿರುಪತಿ: ಅಂಧ್ರಪ್ರದೇಶದ ಆತ್ಮಾಕೂರು ಅರಣ್ಯ ವಲಯದಲ್ಲಿ ತಾಯಿಯಿಂದ ತಪ್ಪಿಸಿಕೊಂಡ ನಾಲ್ಕು ಹುಲಿಮರಿಗಳನ್ನು ಅರಣ್ಯಾಧಿಕಾರಿಗಳು ತಿರುಪತಿಯ ಶ್ರೀ ವೆಂಕಟೇಶ್ವರ ಜೂಲಾಜಿಕಲ್ ಪಾರ್ಕ್‌ಗೆ (ಜೂ) ಸೇರಿಸಿದ್ದಾರೆ.

ನಂದ್ಯಾಲ ಜಿಲ್ಲೆಯ ಕೋಟಪಲ್ಲಿ ತಾಲೂಕಿನ ಪೆದ್ದ ಗುಮ್ಮದಪುರಂನಲ್ಲಿ ಅರಣ್ಯಕ್ಕೆ ಹೊಂದಿಕೊಂಡಿರುವ ಹೊಲದಲ್ಲಿನ ಫಾರ್ಮ್‌ ಹೌಸ್ ಬಳಿ ಫೆ. 6ರಂದು ಈ ನಾಲ್ಕು ಹುಲಿ ಮರಿಗಳು ಪತ್ತೆಯಾಗಿದ್ದವು. ಗ್ರಾಮಸ್ಥರು ಅವನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಆಗಮಿಸಿದ ಆತ್ಮಾಕೂರು ಅರಣ್ಯ ವಲಯದ ಅಧಿಕಾರಿಗಳು ‘ಹುಲಿ ಮರಿಗಳನ್ನು ಕಾಡಿನಲ್ಲಿ ಬಿಟ್ಟಿದ್ದು, ಅವುಗಳನ್ನು ತಾಯಿ ಹುಲಿ ಬಳಿ ಸುರಕ್ಷಿತವಾಗಿ ಸೇರಿಸುತ್ತೇವೆ. ಆರೋಗ್ಯಕರವಾಗಿವೆ’ ಎಂದು ತಿಳಿಸಿದ್ದರು.

ADVERTISEMENT

ಆದರೆ, ಕಳೆದ ಐದು ದಿನಗಳಿಂದ ತಾಯಿ ಹುಲಿ ಪತ್ತೆ ಮಾಡಲು ಮಾಡಿದ ಪ್ರಯತ್ನಗಳು ವಿಫಲವಾಗಿದ್ದರಿಂದ ಹುಲಿಗಳ ಸುರಕ್ಷತೆ ದೃಷ್ಠಿಯಿಂದ ಅವುಗಳನ್ನು ಜೂಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ದಿ ಟೈಮ್ಸ್ ಆಫ್ ಇಂಡಿಯಾ ವೆಬ್‌ಸೈಟ್ ವರದಿ ಮಾಡಿದೆ.

ಆತ್ಮಾಕೂರು ಅರಣ್ಯ ವಲಯದಲ್ಲಿ ತಾಯಿ ಹುಲಿ ಪತ್ತೆಗೆ ಹುಡುಕಾಟ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ ಹುಲಿ ಮರಿಗಳ ಫೋಟೊಗಳನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದ ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಅವರು ಹುಲಿ ಮರಿಗಳನ್ನು ರಕ್ಷಣೆ ಮಾಡಿರುವ ಪೆದ್ದ ಗುಮ್ಮದಪುರಂನ ಗ್ರಾಮಸ್ಥರನ್ನು ಕೊಂಡಾಡಿದ್ದರು. ಇದೀಗ ಮತ್ತೊಂದು ಟ್ವೀಟ್ ಮಾಡಿರುವ ಅವರು ಎಲ್ಲ ಸುದ್ದಿಗಳು ಹ್ಯಾಪಿ ಎಂಡಿಂಗ್ ಇರುವುದಿಲ್ಲ. ತಾಯಿ ಹುಲಿ ಸಿಗದಿದ್ದಕ್ಕೆ ನಾಲ್ಕು ಹುಲಿ ಮರಿಗಳನ್ನು ಜೂಗೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.