ADVERTISEMENT

LS Poll | ರಾಮ ಮಂದಿರದಿಂದ ಬಿಜೆಪಿಗೆ ಯಾವುದೇ ಲಾಭ ಸಿಗುವುದಿಲ್ಲ: ಶರದ್‌ ಪವಾರ್‌

ಪಿಟಿಐ
Published 19 ಏಪ್ರಿಲ್ 2024, 10:11 IST
Last Updated 19 ಏಪ್ರಿಲ್ 2024, 10:11 IST
ಶರದ್‌ ಪವಾರ್‌
ಶರದ್‌ ಪವಾರ್‌   

ಪುಣೆ: ಅಯೋಧ್ಯೆ ರಾಮ ಮಂದಿರ ವಿಚಾರ ಮುಗಿದಿದೆ, ಇನ್ನು ಮುಂದೆ ಯಾರೂ ಅದನ್ನು ಚರ್ಚಿಸುವುದಿಲ್ಲ ಎಂದು ಹೇಳಿರುವ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎಸ್‌ಸಿಪಿ) ಮುಖ್ಯಸ್ಥ ಶರದ್ ಪವಾರ್, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಇದರಿಂದ ಯಾವುದೇ ರಾಜಕೀಯ ಲಾಭ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಪುಣೆ ಜಿಲ್ಲೆಯ ಪುರಂದರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಣಾಯಕ ಪಾತ್ರ ವಹಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಯೋಧ್ಯೆಯಲ್ಲಿ ರಾಮ ಮಂದಿರದ ಸಮಸ್ಯೆ ಈಗ ಮುಗಿದಿದೆ. ಯಾರೂ ಅದರ ಬಗ್ಗೆ ಚರ್ಚಿಸುವುದಿಲ್ಲ’ ಎಂದು ತಿಳಿಸಿದ್ದಾರೆ.

ರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ, ದೇಗುಲದಲ್ಲಿ ಸೀತಾದೇವಿಯ ವಿಗ್ರಹವಿಲ್ಲ ಎಂದು ಸಭೆಯೊಂದರಲ್ಲಿ ಕೆಲವು ಮಹಿಳೆಯರು ದೂರಿದರು ಎಂದು ಪವಾರ್‌ ಹೇಳಿದ್ದಾರೆ.

ADVERTISEMENT

ಪವಾರ್‌ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ, ಮಾಜಿ ಮುಖ್ಯಮಂತ್ರಿ (ಶರದ್‌ ಪವಾರ್‌) ಅವರು ರಾಮ ಮಂದಿರದ ಬಗ್ಗೆ ಪ್ರತಿಕ್ರಿಯಿಸುವ ಮೊದಲು ಮಾಹಿತಿ ತಿಳಿದುಕೊಳ್ಳಬೇಕು. ಏಕೆಂದರೆ, ಅಲ್ಲಿರುವುದು ಬಾಲ ರಾಮನ ಮೂರ್ತಿ. ತಮ್ಮ ಸೊಸೆಯನ್ನು ಹೊರಗಿನವರೆನ್ನುವ ಪವಾರ್‌, ಸೀತಾದೇವಿಯ ಬಗ್ಗೆ ಕಾಳಜಿ ತೋರಿಸುವುದು ಬೂಟಾಟಿಕೆಯ ಪರಮಾಧಿಯೇ ಹೊರತು ಬೇರೇನೂ ಅಲ್ಲ ಎಂದು ತಿಳಿಸಿದ್ದಾರೆ.

ಸುಪ್ರಿಯಾ ಸುಳೆ ವಿರುದ್ಧ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ಗುರಿಯಾಗಿಸಿ ಶರದ್‌ ಪವಾರ್ ಇತ್ತೀಚೆಗೆ ಮಾಡಿದ ಹೇಳಿಕೆಯನ್ನು ಬಿಜೆಪಿ ನಾಯಕ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.