ADVERTISEMENT

ಆರ್‌ಎಸ್‌ಎಸ್, ಪಿಎಫ್‌ಐ ನಾಯಕರ ಹತ್ಯೆ ಹಿಂದೆ ವ್ಯವಸ್ಥಿತ ಸಂಚು: ಕೇರಳ ಪೊಲೀಸ್

ಪಿಟಿಐ
Published 17 ಏಪ್ರಿಲ್ 2022, 10:42 IST
Last Updated 17 ಏಪ್ರಿಲ್ 2022, 10:42 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಕೆಲವೇ ದಿನಗಳ ಅವಧಿಯಲ್ಲಿ ಆರ್‌ಎಸ್ಎಸ್ ಮತ್ತು ಪಿಎಫ್‌ಐ ನಾಯಕರ ಹತ್ಯೆ ನಡೆದಿರುವುದರ ಹಿಂದೆ ಪೂರ್ವಯೋಜಿತ ಸಂಚು ಅಡಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಪಾಲಕ್ಕಾಡ್ ನಿವಾಸಿ, ಆರ್‌ಎಸ್‌ಎಸ್‌ ಕಾರ್ಯಕರ್ತ ಶ್ರೀನಿವಾಸನ್ (45) ಎಂಬುವವರನ್ನು ಗುಂಪೊಂದು ಶನಿವಾರ ಹತ್ಯೆ ಮಾಡಿತ್ತು. ಅದಕ್ಕೂ ಹಲವು ಗಂಟೆಗಳ ಮುನ್ನ ಪಿಎಫ್‌ಐ ನಾಯಕ ಸುಬೇರ್‌ (43) ಎಂಬುವವರ ಹತ್ಯೆ ನಡೆದಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ವಿಜಯ್ ಸಖಾರೆ, ಎರಡೂ ಹತ್ಯೆಗಳ ಹಿಂದೆ ಪೂರ್ವಯೋಜಿತ ಸಂಚು ಇದೆ. ಈ ಕೃತ್ಯಗಳಲ್ಲಿ ಕೊಲೆಗಾರರು ನಿಮಿತ್ತ ಮಾತ್ರ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ನಾವು ಪತ್ತೆಹಚ್ಚಲಿದ್ದೇವೆ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ ನಾಯಕನ ಹತ್ಯೆ ಬಗ್ಗೆ ಸುಳಿವಿದ್ದರೂ ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂಬ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ.

ವ್ಯವಸ್ಥಿತವಾಗಿ ಸಂಚು ಹೂಡಿ ಮಾಡುವ ಹತ್ಯೆಯನ್ನು ತಡೆಯುವುದು ತುಂಬಾ ಕಷ್ಟ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಹತ್ಯೆಗಳು, ವಿಶೇಷವಾಗಿ ಪಿಎಫ್‌ಐ ನಾಯಕನ ಹತ್ಯೆ ರಾಜಕೀಯ ಪ್ರೇರಿತವೇ ಎಂಬುದನ್ನು ಎಡಿಜಿಪಿ ಸ್ಪಷ್ಟಪಡಿಸಿಲ್ಲ. ಆದರೆ, ಪ್ರತೀಕಾರವಾಗಿ ಆರ್‌ಎಸ್‌ಎಸ್ ನಾಯಕನ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎರಡೂ ಹತ್ಯೆಗಳಿಗೆ ಸಂಬಂಧಿಸಿ ಈವರೆಗೆ ಯಾರನ್ನೂ ಬಂಧಿಸಿಲ್ಲ. ಆದರೆ ಅನೇಕ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದರಿಂದ ದೊರೆತ ಮಾಹಿತಿಯ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು. ಹತ್ಯೆಗಳ ತನಿಖೆಗೆ ಎರಡು ವಿಶೇಷ ತನಿಖಾ ತಂಡಗಳನ್ನು (ಎಸ್‌ಐಟಿ) ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.