
ಲಖನೌ: ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ಹಿಂಡಿನ ದಾಳಿಗೆ ಅಂಪೈರ್ ಒಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ. ಮಾತ್ರವಲ್ಲ 12ಕ್ಕೂ ಅಧಿಕ ಆಟಗಾರರು ಗಾಯಗೊಂಡಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಉನ್ನಾವೋ ಜಿಲ್ಲೆಯ ಶುಕ್ಲಗಂಜ್ನ ಸಪ್ರು ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಾಗ ಜೇನುನೊಣಗಳ ಹಿಂಡು ಆಟಗಾರರ ಮೇಲೆ ದಾಳಿ ಮಾಡಿದೆ. ಕೆಲವು ಆಟಗಾರರು ಮತ್ತು ಬೆರಳೆಣಿಕೆಯಷ್ಟು ಪ್ರೇಕ್ಷಕರು ಸುರಕ್ಷಿತ ಸ್ಥಳಕ್ಕೆ ಓಡಿ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.
ಆದರೆ, ಪಂದ್ಯದ ಅಂಪೈರಿಂಗ್ ಮಾಡುತ್ತಿದ್ದ ಕಾನ್ಪುರದ ನಿವಾಸಿ 65 ವರ್ಷದ ಮಾಣಿಕ್ ಗುಪ್ತಾ ಅವರ ಮೇಲೆ ಅತೀ ಹೆಚ್ಚು ಜೇನು ನೊಣಗಳು ದಾಳಿ ಮಾಡಿದ್ದರಿಂದ, ಅವರು ಸ್ಥಳದಲ್ಲೇ ಕುಸಿದು ಬಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಜೇನುನೊಣಗಳ ದಾಳಿಯಲ್ಲಿ ಸುಮಾರು 15 ಆಟಗಾರರು ಗಾಯಗೊಂಡಿದ್ದು, ಉನ್ನಾವ್ ಮತ್ತು ಕಾನ್ಪುರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.