ನಿರ್ಮಲಾ ಸೀತಾರಾಮನ್
(ಪಿಟಿಐ ಚಿತ್ರ)
ನವದೆಹಲಿ: 'ಮೇಕ್ ಇನ್ ಇಂಡಿಯಾ'ದಲ್ಲಿ ನಂಬಿಕೆಯನ್ನಿಡಿ. ರಕ್ಷಣೆ ಸೇರಿದಂತೆ ಉತ್ಪಾದನಾ ವಲಯ ಬಲಪಡಿಸಲು ಸರ್ಕಾರ ತೆಗೆದುಕೊಂಡಿರುವ ಹಲವಾರು ಯೋಜನೆಗಳು ಉತ್ತಮ ಫಲಿತಾಂಶವನ್ನು ನೀಡುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಮಂಗಳವಾರ) ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಈ ಕುರಿತು ಮಾತನಾಡಿದ ನಿರ್ಮಲಾ, 'ಮೇಕ್ ಇನ್ ಇಂಡಿಯಾ' ನಿಜವಾಗಿಯೂ ಉತ್ತಮ ಫಲಿತಾಂಶವನ್ನು ನೀಡಿದೆ. ದೇಶದ ಉತ್ಪಾದನಾ ವಲಯವನ್ನು ಬಲಪಡಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಹೆಜ್ಜೆಯನ್ನಿಟ್ಟಿದ್ದೇವೆ ಎಂದು ಹೇಳಿದ್ದಾರೆ.
ಭಾರತವನ್ನು ಉತ್ಪಾದನೆ, ವಿನ್ಯಾಸ ಹಾಗೂ ನಾವೀನ್ಯತೆಯ ಕೇಂದ್ರವನ್ನಾಗಿ ಮಾರ್ಪಡಿಸುವ ಉದ್ದೇಶದೊಂದಿಗೆ 'ಮೆಕ್ ಇನ್ ಇಂಡಿಯಾ' ಯೋಜನೆಯನ್ನು 2014ರಲ್ಲಿ ಪ್ರಾರಂಭಿಸಲಾಯಿತು. ಹೂಡಿಕೆಗೆ ಹೆಚ್ಚಿನ ಅನುಕೂಲ ಕಲ್ಪಿಸುವುದು, ನಾವೀನ್ಯತೆ ಹಾಗೂ ಅತ್ಯುತ್ತಮ ದರ್ಜೆಯ ಮೂಲಸೌಕರ್ಯವನ್ನು ಒದಗಿಸುವುದು ಇದರ ಉದ್ದೇಶವಾಗಿತ್ತು.
ಆದರೆ 'ಮೇಕ್ ಇನ್ ಇಂಡಿಯಾ' ಯೋಜನೆಯು ಸಂಪೂರ್ಣ ವೈಫಲ್ಯವನ್ನು ಕಂಡಿವೆ ಎಂದು ವಿಪಕ್ಷಗಳು ಆರೋಪಿಸಿವೆ.
ಈ ವಾದ ತಳ್ಳಿ ಹಾಕಿರುವ ನಿರ್ಮಲಾ, ಉತ್ಪಾದನಾ ನೀತಿಯನ್ನು ರೂಪಿಸುವಲ್ಲಿ ಕಾಂಗ್ರೆಸ್ ಸಾಕಷ್ಟು ಸಮಯ ತೆಗೆದುಕೊಂಡಿತು ಎಂದು ಆರೋಪಿಸಿದ್ದಾರೆ.
ಮೇಕ್ ಇನ್ ಇಂಡಿಯಾ ಕೆಲಸ ಮಾಡುತ್ತಿಲ್ಲ ಎಂದು ನೀವು ಆರೋಪಿಸುತ್ತಿದ್ದೀರಿ. ಅಂದರೆ ಉತ್ಪಾದನಾ ನೀತಿಯೇ ಸರಿಯಿರಲಿಲ್ಲ ಎಂದಲ್ಲವೇ? ಇದು ನಿಮ್ಮದೇ ನೀತಿಯಾಗಿತ್ತು. ಆದರೆ ನಾವದನ್ನು ಕಾರ್ಯಸಾಧ್ಯತಾ ನೀತಿಯನ್ನಾಗಿ ಬದಲಾಯಿಸಿದಾಗ ಮೇಕ್ ಇನ್ ಇಂಡಿಯಾ ರೂಪುಗೊಂಡಿತು. ಈಗ ನಿಮಗೆ ಸಮಸ್ಯೆ ಕಾಣಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.