ಹೈದರಾಬಾದ್: ‘ತೆಲಗು ದೇಶಂ ಪಕ್ಷದ (ಟಿಡಿಪಿ) ಪ್ರಮುಖ ನಾಯಕನಾಗಿ ರಾಷ್ಟ್ರೀಯ ಮಟ್ಟದಲ್ಲಿ ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಅವರ ಹೆಸರು ಪ್ರಜ್ವಲಿಸಿದೆ’–ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಿಶಾಖಪಟ್ಟಣಂನಲ್ಲಿ ನಡೆದ ಯೋಗದಿನದ ಕಾರ್ಯಕ್ರಮದಲ್ಲಿ ನಾರಾ ಲೋಕೇಶ್ ಅವರನ್ನು ಹೀಗೆ ಪ್ರಶಂಸಿಸಿದರು. ಅವರ ಈ ಮಾತು ರಾಜ್ಯ ರಾಜಕಾರಣದಲ್ಲಿ ಸ್ಥಾನಪಲ್ಲಟದ ಸುಳಿವನ್ನು ನೀಡಿದೆ.
ಯೋಗ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ‘ವಿಶಾಖಪಟ್ಟಣವು ಪ್ರಕೃತಿ ಹಾಗೂ ಪ್ರಗತಿ ಮೇಳೈಸಿರುವ ನಗರವಾಗಿದ್ದು, ಇಲ್ಲಿ ಆಯೋಜಿಸಿರುವ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ನೇತೃತ್ವದಲ್ಲಿ ಯೋಗ ಆಂಧ್ರ ಅಭಿಯಾನ ಎಂಬ ವಿಶೇಷ ಅಭಿಯಾನವನ್ನು ರಾಜ್ಯ ಕೈಗೆತ್ತಿಕೊಂಡಿದೆ. ಸಮಾಜದ ಪ್ರತಿಯೊಂದು ಸ್ತರಕ್ಕೂ ಈ ಅಭಿಯಾನವನ್ನು ತಲುಪಿಸುವಲ್ಲಿ ನಾ.ರಾ.ಲೋಕೇಶ್ ಅವರ ಶ್ರಮವನ್ನು ಶ್ಲಾಘಿಸಲೇಬೇಕು‘ ಎಂದು ಪ್ರಶಂಸಿಸಿದ್ದಾರೆ.
ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಪುತ್ರರಾಗಿರುವ ನಾರಾ ಲೋಕೇಶ್, ಪ್ರಸಕ್ತ ರಾಜ್ಯದ ಐಟಿ ಸಚಿವರಾಗಿದ್ದಾರೆ. ಇತ್ತೀಚೆಗಷ್ಟೇ ಅವರನ್ನು ಟಿಡಿಪಿ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಪ್ರಸ್ತಾಪವೂ ಬಂದಿತ್ತು. ಈ ನಡುವೆಯೇ ಮೋದಿ ಅವರಿಂದಲೇ ಲೋಕೇಶ್ಗೆ ಮೆಚ್ಚುಗೆ ಸಿಕ್ಕಿದ್ದು, ಟಿಡಿಪಿಯಲ್ಲಿ ಮಹತ್ತರ ಸ್ಥಾನ ಪಲ್ಲಟವಾಗಬಹುದೆಂಬ ನಿರೀಕ್ಷೆ ಹುಟ್ಟುಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.