ನವದೆಹಲಿ: 1984ರ ಭೋಪಾಲ್ ಅನಿಲ ದುರಂತದ ವಿಷಕಾರಿ ತ್ಯಾಜ್ಯವನ್ನು ಸ್ಥಳಾಂತರಿಸುವ ಮತ್ತು ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪೀಥಂಪುರದಲ್ಲಿ ವಿಲೇವಾರಿ ಮಾಡುವ ಕುರಿತಾದ ಮಧ್ಯಪ್ರದೇಶ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಪ್ರಾಯೋಗಿಕ ಚಾಲನೆಗೆ ತಡೆ ನೀಡಲು ನಿರಾಕರಿಸಿದೆ. ಜತೆಗೆ, ಎನ್ಇಇಆರ್ಐ, ಎನ್ಜಿಆರ್ಐ ಮತ್ತು ಸಿಪಿಸಿಬಿಯ ತಜ್ಞರು ಈ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದನ್ನು ಮಧ್ಯಪ್ರದೇಶ ಹೈಕೋರ್ಟ್ ಮತ್ತು ತಜ್ಞರ ಸಮಿತಿಯು ಪರಿಗಣಿಸಿದೆ ಎಂದೂ ಹೇಳಿದೆ.
ಇದೀಗ ನಿಷ್ಕ್ರಿಯಗೊಂಡಿರುವ, ಭೂಪಾಲ್ನ ಯೂನಿಯನ್ ಕಾರ್ಬೈಡ್ ಕಂಪನಿಯ 337 ಟನ್ ತ್ಯಾಜ್ಯವನ್ನು ಪೀಥಂಪುರದಲ್ಲಿ ವಿಲೇವಾರಿ ಮಾಡಿದಲ್ಲಿ ಅದು ಸ್ಥಳೀಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅಲ್ಲದೆ ಪರಿಸರದ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ಪ್ರತಿಭಟನಕಾರರು ಈಚೆಗೆ ಪ್ರತಿಪಾದಿಸಿದ್ದರು.
ಕಾರ್ಬೈಡ್ ತ್ಯಾಜ್ಯವು ವಿಷಕಾರಿಯಲ್ಲ ಎಂದು ಮಧ್ಯಪ್ರದೇಶ ಸರ್ಕಾರ ಹೇಳುತ್ತಿದೆ. ಅದು ನಿಜವೇ ಆಗಿದ್ದಲ್ಲಿ, ತ್ಯಾಜ್ಯವನ್ನು ಭೋಪಾಲ್ನಲ್ಲಿಯೇ ವಿಲೇವಾರಿ ಮಾಡಬಹುದಲ್ಲ ಎಂದು ಪ್ರಶ್ನಿಸಿದ್ದರು.
‘ತ್ಯಾಜ್ಯವನ್ನು ರಾಜಸ್ಥಾನದ ಥಾರ್ ಜಿಲ್ಲೆಯ ಪೋಖ್ರಾನ್ಗೆ ಕೊಂಡೊಯ್ದು, ಅಲ್ಲಿಯೇ ಹೂಳಲಿ’ ಎಂದು ಅವರು ಆಗ್ರಹಿಸಿದ್ದರು.
ಭೋಪಾಲ್ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ 1984ರ ಡಿಸೆಂಬರ್ 2 ಮತ್ತು 3ರ ನಡುವಿನ ರಾತ್ರಿ ಸೋರಿಕೆಯಾದ ವಿಷಕಾರಿ ಮೀಥೈಲ್ ಐಸೊಸೈಯನೇಟ್ (ಎಂಐಸಿ) ಅನಿಲವು 5,479 ಜನರ ಸಾವಿಗೆ ಕಾರಣವಾಗಿತ್ತು. ಸಾವಿರಾರು ಮಂದಿ ದೀರ್ಘಾವಧಿಯ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದರು. ಇದನ್ನು ‘ಭೂಪಾಲ್ ಅನಿಲ ದುರಂತ’ ಎಂದೂ ಕರೆಯಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.