ADVERTISEMENT

Bihar Election 2025 |‘ವಿಕಾಸ ಮಿತ್ರ’ರಿಗೆ ₹25 ಸಾವಿರ ಭತ್ಯೆ: ನಿತೀಶ್‌ ಘೋಷಣೆ

ಪಿಟಿಐ
Published 21 ಸೆಪ್ಟೆಂಬರ್ 2025, 7:16 IST
Last Updated 21 ಸೆಪ್ಟೆಂಬರ್ 2025, 7:16 IST
<div class="paragraphs"><p>ನಿತೀಶ್ ಕುಮಾರ್</p></div>

ನಿತೀಶ್ ಕುಮಾರ್

   

ಪಟ್ನಾ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿಹಾರದ ಎನ್‌ಡಿಎ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸಿದೆ. ಸುದೀರ್ಘ 20 ವರ್ಷ ಅಧಿಕಾರದಲ್ಲಿದ್ದರೂ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ‘ಇಂಡಿಯಾ’ ಮೈತ್ರಿಕೂಟದ ಭರವಸೆಗಳನ್ನೇ ನಕಲು ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಟೀಕಿಸಿವೆ.

ಗ್ರಾಮಗಳಲ್ಲಿ ಕೆಲಸ ಮಾಡುವ 10,000ಕ್ಕೂ ಹೆಚ್ಚು ‘ವಿಕಾಸ ಮಿತ್ರ'ರಿಗೆ ಟ್ಯಾಬ್ಲೆಟ್‌ಗಳನ್ನು ಖರೀದಿಸಲು ತಲಾ ₹25 ಸಾವಿರ ಹಣಕಾಸಿನ ನೆರವು ನೀಡಲಾಗುವುದು ಎಂದು ನಿತೀಶ್ ಕುಮಾರ್‌ ಅವರು ಭಾನುವಾರ ಘೋಷಿಸಿದರು.

ADVERTISEMENT

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಅವರನ್ನು ಫಲಾನುಭವಿಗಳನ್ನಾಗಿಸುವ ಕೆಲಸವನ್ನು ‘ವಿಕಾಸ ಮಿತ್ರ’ರು ಮಾಡುತ್ತಿದ್ದಾರೆ. ಟ್ಯಾಬ್ಲೆಟ್‌ಗಳನ್ನು ಖರೀದಿಸಿದರೆ ‘ವಿಕಾಸ ಮಿತ್ರ’ರಿಗೆ ತಮ್ಮ ಕೆಲಸವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಸಾಧ್ಯ ಎಂದು ಅವರು ಹೇಳಿದರು.

‘ವಿಕಾಸ ಮಿತ್ರ’ರು ಪಡೆಯುತ್ತಿರುವ ಪ್ರಯಾಣ ಭತ್ಯೆಯನ್ನು ತಿಂಗಳಿಗೆ ₹1,900ರಿಂದ ₹2,500ಕ್ಕೆ ಮತ್ತು ಅವರ ಸ್ಟೇಷನರಿ ಭತ್ಯೆಯನ್ನು ₹900ರಿಂದ ₹1,500ಕ್ಕೆ ಹೆಚ್ಚಿಸಲಾಗುವುದು ಎಂದು ಪ್ರಕಟಿಸಿದರು.

‘ಶಿಕ್ಷಾ ಸೇವಕ್‌’ ಮತ್ತು ‘ತಾಲಿಮೀ ಮರ್ಕಜ್‌’ಗಳಾಗಿ ಕೆಲಸ ಮಾಡುತ್ತಿರುವ 30 ಸಾವಿರಕ್ಕೂ ಅಧಿಕ ಮಂದಿಗೆ ಸ್ಮಾರ್ಟ್‌ಫೋನ್‌ ಖರೀದಿಸಲು ₹10 ಸಾವಿರ ಹಣಕಾಸಿನ ನೆರವು ನೀಡಲು ಸರ್ಕಾರ ನಿರ್ಧರಿಸಿದೆ. 

ಮಹಾದಲಿತ, ಅಲ್ಪಸಂಖ್ಯಾತ ಮತ್ತು ತೀರಾ ಹಿಂದುಳಿದ ಸಮುದಾಯಗಳ ಮಕ್ಕಳು ಶಾಲಾ ಶಿಕ್ಷಣ ಪಡೆಯುವುದನ್ನು ಖಾತರಿಪಡಿಸುವ ಕೆಲಸವವನ್ನು ‘ಶಿಕ್ಷಾ ಸೇವಕ್‌’ ಮತ್ತು ‘ತಾಲಿಮೀ ಮರ್ಕಜ್‌’ಗಳು ಮಾಡುತ್ತಿದ್ದಾರೆ.

ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕಲರ ಪಿಂಚಣಿಯನ್ನು ₹700ರಷ್ಟು ಹೆಚ್ಚಿಸುವ ನಿರ್ಧಾರವನ್ನು ಬಿಹಾರ ಸರ್ಕಾರ ಜೂನ್‌ನಲ್ಲಿ ತೆಗೆದುಕೊಂಡಿತ್ತು.

ಸರ್ಕಾರದ ನಿರ್ಧಾರಗಳಿಗೆ ಪ್ರತಿಕ್ರಿಯಿಸಿದ ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ, ‘ಅವರು (ಎನ್‌ಡಿಎ ನಾಯಕರು) ನಮ್ಮ ಅಭಿವೃದ್ಧಿ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ. ಬಿಹಾರದ ಯುವಜನರು ಈ ನಕಲು ಮತ್ತು ನಿಷ್ಪ್ರಯೋಜಕ ಸರ್ಕಾರವನ್ನು ತೊಡೆದುಹಾಕಲು ಬಯಸುತ್ತಾರೆ’ ಎಂದಿದ್ದಾರೆ.

ನಿತೀಶ್ ಕುಮಾರ್ ಅವರು ದೂರದೃಷ್ಟಿ ಉಳ್ಳ ನಾಯಕರಾಗಿದ್ದು ಮಹಿಳೆಯರು ಯುವಜನರು ದುರ್ಬಲ ವರ್ಗದವರು ಸೇರಿದಂತೆ ರಾಜ್ಯದ ಎಲ್ಲರ ಶ್ರೇಯೋಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ 
ರಾಜೀವ್‌ ರಂಜನ್ ಪ್ರಸಾದ್ ಜೆಡಿಯು ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.