
ತೇಜಸ್ವಿ ಯಾದವ್
(ಪಿಟಿಐ ಚಿತ್ರ)
ಪಟ್ನಾ: ದೇಶದಲ್ಲೇ ಬಿಹಾರವನ್ನು ನಂ.1 ಮಾಡುವ ಗುರಿಯನ್ನು ಹೊಂದಿರುವ ಪ್ರಣಾಳಿಕೆಯನ್ನು 'ಇಂಡಿಯಾ' ಮೈತ್ರಿಕೂಟ ಬಿಡುಗಡೆ ಮಾಡಲಿದೆ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಇಂದು (ಮಂಗಳವಾರ) ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟದ ಪ್ರಣಾಳಿಕೆ ಇಂದು ಮಧ್ಯಾಹ್ನದ ವೇಳೆ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ, 'ನಮ್ಮ ರಾಜ್ಯದ ಬಗ್ಗೆ ದೂರದೃಷ್ಟಿ ಹಾಗೂ ಅಭಿವೃದ್ಧಿಯ ಮಾರ್ಗಸೂಚಿಯನ್ನು ನಾವು ಹೊಂದಿದ್ದೇವೆ. ಇದನ್ನು 'ತೇಜಸ್ವಿ ಪ್ರಾಣ ಪತ್ರ' ಎಂದೂ ಕರೆಯಬಹುದು' ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೇ ಇರುವುದಕ್ಕೆ ಎನ್ಡಿಎ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ಚುನಾವಣೆಗೂ ಮೊದಲೇ ನಾವು ಸಿಎಂ ಅಭ್ಯರ್ಥಿಯನ್ನು ಹೆಸರಿಸಿದ್ದೇವೆ. ಇಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿದ್ದೇವೆ. ಆದೆರೆ ಎನ್ಡಿಎ ಪಕ್ಷಗಳ ಪರಿಸ್ಥಿತಿ ಏನು? ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ನಮ್ಮ ವಾಗ್ದಾನಗಳನ್ನು ನಕಲು ಮಾಡಲಾಗುತ್ತಿದೆ' ಎಂದು ಆರೋಪಿಸಿದ್ದಾರೆ.
'ಬಿಹಾರಕ್ಕಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಏನನ್ನೂ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದಾಗೆಲ್ಲಾ ವಿರೋಧ ಪಕ್ಷದವರನ್ನು ನಿಂದಿಸುತ್ತಾರೆ. ನಕರಾತ್ಮಕ ರಾಜಕೀಯವನ್ನು ಮಾಡುತ್ತಾರೆ' ಎಂದು ಅವರು ಟೀಕಿಸಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಹಾಗೂ 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.