ಪಟ್ನಾ: ಬಿಹಾರದ ರಾಜಕೀಯ ಪಡಸಾಲೆಯಲ್ಲಿ ‘ಪಲ್ಟಿ ರಾಮ‘, ಗೊಸುಂಬೆ, ಅವಕಾಶವಾದಿ ಎಂದು ರಾಷ್ಟ್ರೀಯ ಜನತಾದಳ (ಆರ್ಜೆಡಿ) ಪಕ್ಷದ ತೇಜಸ್ವಿ ಯಾದವ್ ಅವರಿಂದ ಮೂದಲಿಸಿಕೊಂಡಿದ್ದ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತೆ ಆರ್ಜೆಡಿಜೊತೆ ಮೈತ್ರಿ ಮಾಡಿಕೊಂಡು 8ನೇ ಬಾರಿಮುಖ್ಯಮಂತ್ರಿಯಾದರು.
ಸುಮಾರು ಎರಡು ದಶಕಗಳಿಂದ ರಾಜಕಾರಣದಲ್ಲಿ ಸಕ್ರಿಯರಾಗಿರುವ ನಿತೀಶ್ ಕುಮಾರ್15 ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದಾರೆ. ಅವರು 2005ರಿಂದಲೂ ಬಿಹಾರದಲ್ಲಿ ಅಧಿಕಾರದ ಪಾರಮ್ಯ ಮೆರೆದಿದ್ದಾರೆ.
ಕಾಂಗ್ರೆಸ್ ಮತ್ತು ಆರ್ಜೆಡಿ ಪಕ್ಷಗಳ 2005ವರೆಗೂ ಅಧಿಕಾರದಲ್ಲಿದ್ದವು. ಈ ಪಕ್ಷಗಳು ಬಿಹಾರ ರಾಜ್ಯವನ್ನು ‘ಜಂಗಲ್ ರಾಜ್ಯ‘ಮಾಡಿವೆ ಎಂದು ಆರೋಪ ಮಾಡುವ ಮೂಲಕ ಮೂಲಕ ಜೆಡಿಯು ಮತ್ತು ಬಿಜೆಪಿ 2005ರಲ್ಲಿ ಮೊದಲ ಬಾರಿಗೆ ಅಧಿಕಾರಚುಕ್ಕಾಣಿ ಹಿಡಿದವು. ಇದಕ್ಕೂ ಮುನ್ನ 2000ನೇ ವರ್ಷದಲ್ಲಿ ನಿತೀಶ್ ಕುಮಾರ್ ಸಮಾತ ಪಕ್ಷದ ಮೈತ್ರಿಕೂಟದಿಂದ 7 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು.
2005ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ನಿತೀಶ್ ಕುಮಾರ್ ಸರ್ಕಾರ ರಚನೆ ಮಾಡಿದರು. 2005ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 55 ಹಾಗೂ ಜೆಡಿಯು 88 ಸ್ಥಾನಗಳನ್ನು ಪಡೆದಿತ್ತು. 5 ವರ್ಷ ಪೂರ್ಣಗೊಳಿಸಿದ ನಿತೀಶ್ ಕುಮಾರ್ 2010ರಲ್ಲಿ ಮತ್ತೆ ಬಿಜೆಪಿ ಜೊತೆ ಮೈತ್ರಿಮಾಡಿಕೊಂಡು ಮುಖ್ಯಮಂತ್ರಿಯಾದರು. 2014 ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಪಕ್ಷ ಹೀನಾಯವಾಗಿ ಸೋತ ಪರಿಣಾಮ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು.
2015ರ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ತೊರೆದು ಆರ್ಜೆಡಿ ನೇತೃತ್ವದ ಮಹಾಘಟಬಂಧನಜೊತೆ ಮೈತ್ರಿಮಾಡಿಕೊಂಡು 16ನೇ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ದಾಖಲಿಸಿದರು. ಆರ್ಜೆಡಿಯೊಂದಿಗೆ ಕಲಹ ಹಾಗೂ ಭ್ರಷ್ಟಚಾರ ಆರೋಪಗಳಪರಿಣಾಮ ಆ ಮೈತ್ರಿ ಕಡಿದುಕೊಂಡರು. ನಂತರ ಬಿಜೆಪಿ ಬೆಂಬಲದಲ್ಲಿ ಸರ್ಕಾರ ರಚನೆ ಮಾಡಿ ಮುಖ್ಯಮಂತ್ರಿಯಾದರು.
2020ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು 17ನೇ ವಿಧಾನಸಭೆ ಚುನಾವಣೆ ಎದುರಿಸಿದರು. ಇದರಲ್ಲಿ ಬಹುಮತ ಪಡೆದು ಮತ್ತೆ ಮುಖ್ಯಮಂತ್ರಿಯಾದರು. ಇದೀಗ ಬಿಜೆಪಿ ಜೊತೆ ಮೈತ್ರಿ ಕಡಿದುಕೊಂಡು ಮತ್ತೆ ಆರ್ಜೆಡಿ ನೇತೃತ್ವದ ಮಹಾಘಟಬಂದನ ಮೈತ್ರಿ ಜೊತೆ ಸೇರಿ ಮಾಡಿ 8ನೇ ಸಲನಿತೀಶ್ ಕುಮಾರ್ ಮುಖ್ಯಮಂತ್ರಿಯಾದರು.
ಸದ್ಯ ನಿತೀಶ್ ಕುಮಾರ್ ನಿರ್ಧಾರಕ್ಕೆ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ‘2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುತ್ತದೆ. ಅವರೇ ಪ್ರಧಾನಿಯಾಗುತ್ತಾರೆ‘ ಎಂದು ಅಮಿತ್ ಶಾ ಘೋಷಣೆ ಮಾಡಿದ್ದರು. ಈ ಹೇಳಿಕೆ ಬೆನ್ನಲೇ ನಿತೀಶ್ ಕುಮಾರ್ ಬಿಜೆಪಿಯಿಂದ ಅಂತರ ಕಾಯ್ದುಕೊಂಡರು. ನಂತರ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಆರ್ಪಿಸಿ ಸಿಂಗ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಬಳಿಕ ನಿತೀಶ್ ಮೈತ್ರಿ ತೊರೆಯುವ ನಿರ್ಧಾರ ಮಾಡಿದರು ಎಂದು ಬಿಹಾರದ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
2024ರ ಚುನಾವಣೆಯಲ್ಲಿ ನಿತೀಶ್ ಕುಮಾರ್ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇವನ್ನೂ ಓದಿ:
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.