ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಸಿನಿಮಾ, ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಖ್ಯಾತರಾಗಿರುವ ವ್ಯಕ್ತಿಗಳನ್ನು ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್, ಸನ್ನಿ ಡಿಯೋಲ್, ಮೋಹನ್ ಲಾಲ್, ಮಾಧುರಿ ದೀಕ್ಷಿತ್ ಮತ್ತು ಮಾಜಿ ಕ್ರಿಕೆಟಿಗವಿರೇಂದ್ರ ಸೆಹ್ವಾಗ್ ಮೊದಲಾದವರಿಗೆ ಬಿಜೆಪಿ ಮಣೆ ಹಾಕಲಿದೆ ಎಂದು ಹಿರಿಯ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ಸಿನಿಮಾ, ಕಲೆ, ಮಾಧ್ಯಮ, ಆರೋಗ್ಯ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಹೆಸರು ಗಳಿಸಿರುವ ವ್ಯಕ್ತಿಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ.ಈ ಕ್ಷೇತ್ರದಲ್ಲಿ ಉತ್ತಮ ಕೆಲಸಮಾಡಿ ಜನಮನ ಗೆದ್ದವರು ಹಲವಾರು ಮಂದಿ ಇದ್ದಾರೆ.ಹೊಸ ದೃಷ್ಟಿಕೋಸ ಹೊಂದಿರುವ ಇಂಥಾ ವ್ಯಕ್ತಿಗಳು ರಾಜಕೀಯಕ್ಕೆ ಬಂದರೆ ಒಳ್ಳೆಯದು ಎಂದು ಬಿಜೆಪಿ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ ಲೋಕಸಭಾ ಕ್ಷೇತ್ರದಿಂದ ಅಕ್ಷಯ್ ಕುಮಾರ್ಅವರನ್ನು ಕಣಕ್ಕಿಳಿಸಲು ನಾವು ಯೋಚಿಸುತ್ತಿದ್ದೇವೆ.ಗುರುದಾಸ್ಪುರ ಲೋಕಸಭಾ ಸೀಟಿನಲ್ಲಿ ಸನ್ನಿ ಡಿಯೋಲ್, ಮುಂಬೈಯಿಂದ ಮಾಧುರಿ ದೀಕ್ಷಿಕ್ ಮತ್ತು ತಿರುವನಂತಪುರಂನಿಂದ ಮೋಹನ್ ಲಾಲ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ರಾಜಕಾರಣಿಗಳಲ್ಲದೇ ಇದ್ದವರನ್ನು ಕಣಕ್ಕಿಳಿಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಅಂದರೆ ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಂಡವರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.