ನವದೆಹಲಿಯ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಶನಿವಾರ ಯಮುನಾ ನದಿಯಲ್ಲಿ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಪ್ರತಿಕೃತಿ ವಿಸರ್ಜಿಸಿದರು
–ಪಿಟಿಐ ಚಿತ್ರ
ನವದೆಹಲಿ: ‘ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಯಮುನಾ ನದಿ ಸ್ವಚ್ಛಗೊಳಿಸುವ ಭರವಸೆ ಈಡೇರಿಸಿಲ್ಲ’ ಎಂದು ಟೀಕಿಸಿರುವ ನವದೆಹಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ, ಕೇಜ್ರಿವಾಲ್ ಪ್ರತಿಕೃತಿಯನ್ನು ನದಿಯಲ್ಲಿ ಮುಳುಗಿಸಿ ಶನಿವಾರ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ವರ್ಮಾ, ‘ಎಎಪಿ ಸರ್ಕಾರ ಸತತ 11 ವರ್ಷಗಳಿಂದ ಅಧಿಕಾರದಲ್ಲಿದೆ. ಸುಮಾರು ₹8000 ಕೋಟಿ ವ್ಯಯಿಸಿದೆ. ಆದರೆ, ನದಿ ಸ್ವಚ್ಛತೆಗೆ ಸಂಬಂಧಿಸಿದ ಭರವಸೆಯನ್ನು ಈಡೇರಿಸಿಲ್ಲ. ಇದು, ಜನರಿಗೆ ಮಾಡಿದ ದೊಡ್ಡ ವಂಚನೆ’ ಎಂದು ಟೀಕಿಸಿದರು.
‘2025ರ ವೇಳೆಗೆ ಯಮುನಾ ನದಿಯನ್ನು ಸ್ವಚ್ಛಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಆದರೆ, ಈಗ ಪರಿಸ್ಥಿತಿಯು ಇನ್ನಷ್ಟು ಹದಗೆಟ್ಟಿದೆ. ಪ್ರತಿಕೃತಿಯನ್ನು ಮುಳುಗಿಸುವ ಮೂಲಕ ಎಎಪಿ ವೈಫಲ್ಯವನ್ನು ಜನರ ಮುಂದಿಡುತ್ತಿದ್ದೇವೆ’ ಎಂದು ವರ್ಮಾ ಹೇಳಿದರು.
ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ಅವರ ಅಧಿಕಾರವಧಿಯು ಕೇವಲ ಸುಳ್ಳು ಭರವಸೆ ನೀಡುವುದಕ್ಕೆ ಹಾಗೂ ನಿರಾಧಾರ ಪ್ರತಿಪಾದನೆಗಳಿಗೆ ಮಾತ್ರ ಸೀಮಿತವಾಗಿತ್ತು ಎಂದು ಆರೋಪಿಸಿದರು.
‘ಆದ್ಯತೆ ಮೇರೆಗೆ ಒಳಚರಂಡಿ ಸಮಸ್ಯೆಗೆ ಪರಿಹಾರ’
ನವದೆಹಲಿ: ‘ಎಎಪಿ ಮತ್ತೆ ಅಧಿಕಾರಕ್ಕೆ ಬಂದರೆ ಒಳಚರಂಡಿ ವ್ಯವಸ್ಥೆ ಸಮಸ್ಯೆಗಳನ್ನು ಬಗೆಹರಿಸಲಾಗುವುದು’ ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದರು. ಎಎಪಿ ಸರ್ಕಾರದ ಅಭಿವೃದ್ಧಿ ಸಾಧನೆಗಳ ವಿಡಿಯೊ ಸಂದೇಶದಲ್ಲಿ ಅವರು ‘ಸರ್ಕಾರ ಅನಧಿಕೃತ ಕಾಲೊನಿಗಳಿಗೆ ಮೂಲಸೌಕರ್ಯ ಕಲ್ಪಿಸಿ ಪರಿಸ್ಥಿತಿ ಸುಧಾರಿಸಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.