ಗಾಯಾಳು ಬಿಜೆಪಿ ಸಂಸದರನ್ನು ಭೇಟಿಯಾದ ಶಿವರಾಜ್ ಸಿಂಗ್,ಜೋಶಿ
ಎಎನ್ಐ ಸ್ಕ್ರೀನ್ಗ್ರ್ಯಾಬ್ ಚಿತ್ರ
ನವದೆಹಲಿ: ಸಂಸತ್ತಿನ ಮಕರ ದ್ವಾರದ ಹೊರಗೆ ‘ಇಂಡಿಯಾ’ ಮೈತ್ರಿಕೂಟದ ಸಂಸದರ ಜೊತೆಗಿನ ಘರ್ಷಣೆಯಲ್ಲಿ ಗಾಯಗೊಂಡ ಬಿಜೆಪಿ ಸಂಸದರಾದ ಪ್ರತಾಪ್ ಚಂದ್ರ ಸಾರಂಗಿ ಮತ್ತು ಮುಖೇಶ್ ರಜಪೂತ್ ಅವರನ್ನು ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಲ್ಹಾದ್ ಜೋಶಿ ಆರ್ಎಂಎಲ್ ಆಸ್ಪತ್ರೆಯಲ್ಲಿ ಭೇಟಿ ಮಾಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿ.ಆರ್. ಅಂಬೇಡ್ಕರ್ ಅವರ ಕುರಿತಂತೆ ನೀಡಿರುವ ಅಪಮಾನಕಾರಿ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಇಂಡಿಯಾ ಬಣ, ಕಾಂಗ್ರೆಸ್ಸಿಗರು ಈವರೆಗೆ ಅಂಬೇಡ್ಕರ್ಗೆ ಮಾಡಿರುವ ಅಪಮಾನಕ್ಕೆ ಕ್ಷಮೆ ಕೇಳಬೇಕೆಂದು ಎನ್ಡಿಎ ಸಂಸದರು ನಡೆಸಿದ ಪ್ರತಿಭಟನೆ ವೇಳೆ ಘರ್ಷಣೆ ಸಂಭವಿಸಿದೆ.
ಗಾಯಾಳು ಸಂಸದರ ಭೇಟಿ ಬಳಿಕ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ಸಂಸತ್ತಿನಲ್ಲಿ ನಡೆದ ಘರ್ಷಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಅವರ ಪಕ್ಷವು ದುಷ್ಕೃತ್ಯವೆಸಗಿದೆ ಎಂದು ಟೀಕಿಸಿದ್ದಾರೆ. ಇದು ಸಂಸದೀಯ ಇತಿಹಾಸದಲ್ಲಿ ಕರಾಳ ದಿನ ಎಂದು ಕರೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಚೌಹಾಣ್, 'ಸಂಸತ್ತಿನ ಗೌರವವನ್ನು ಬದಿಗೊತ್ತಿ ಪ್ರಜಾಪ್ರಭುತ್ವವನ್ನು ಛಿದ್ರಗೊಳಿಸಲಾಗಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಮಾಡಿರುವ ಗೂಂಡಾಗಿರಿಯಂತಹ ಬೇರೆ ಉದಾಹರಣೆ ಇಲ್ಲ, ಭಾರತದ ಸಂಸತ್ತಿನ ಇತಿಹಾಸದಲ್ಲಿ ಇಂತಹ ನಡವಳಿಕೆಯನ್ನು ನೋಡಿಲ್ಲ ಎಂದಿದ್ದಾರೆ.
‘ಹರಿಯಾಣ ಮತ್ತು ಮಹಾರಾಷ್ಟ್ರ ಚುನಾವಣೆ ಸೋಲಿನ ಹತಾಶೆಯನ್ನು ಕಾಂಗ್ರೆಸ್ಸಿಗರು ಸಂಸತ್ತಿನಲ್ಲಿ ತೋರಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರಿಗೆ ತರಬೇತಿ ನೀಡಬೇಕಿದೆ’ ಎಂದಿದ್ದಾರೆ.
ಸಂಸದರು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಕಾಂಗ್ರೆಸ್ ಸಂಸದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಹೇಳಿದ್ದಾರೆ.
ಪ್ರತಾಪ್ ಚಂದ್ರ ಸಾರಂಗಿ ಅವರ ಪರಿಸ್ಥಿತಿಯನ್ನೂ ನೋಡದೇ ರಾಹುಲ್ ಗಾಂಧಿ ದೈಹಿಕ ಹಿಂಸಾಚಾರ ನಡೆಸಿದ್ದಾರೆ. 4–5 ಸಂಸದರು ಇದೇ ರೀತಿಯ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಯಾವಾಗಲೂ ಅಂಬೇಡ್ಕರ್ ಅವರನ್ನು ಅವಮಾನಿಸಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.