ADVERTISEMENT

ಬಿಜೆಪಿಗೆ ಸೇರಲು ₹20 ಕೋಟಿ, ಇತರೆ ಶಾಸಕರನ್ನು ಕರೆತಂದರೆ ₹25 ಕೋಟಿ: ಎಎಪಿ ಆರೋಪ

ಪಿಟಿಐ
Published 24 ಆಗಸ್ಟ್ 2022, 9:38 IST
Last Updated 24 ಆಗಸ್ಟ್ 2022, 9:38 IST
ಸಂಜಯ್ ಸಿಂಗ್
ಸಂಜಯ್ ಸಿಂಗ್   

ನವೆದಹಲಿ: ದೆಹಲಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂಬ ಗಂಭೀರ ಆರೋಪನ್ನು ಆಮ್ ಆದ್ಮಿ ಪಕ್ಷ (ಎಎಪಿ) ಮಾಡಿದೆ.

ಎಎಪಿಯ ನಾಲ್ವರು ಶಾಸಕರಿಗೆ ಪಕ್ಷಾಂತರ ಮಾಡಲು ಆಮಿಷ ಒಡ್ಡಲಾಗಿದೆ ಎಂದು ಎಎಪಿ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಬುಧವಾರ ಗಂಭೀರ ಆರೋಪ ಮಾಡಿದ್ದಾರೆ.

ಎಎಪಿಯ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲು ₹20 ಕೋಟಿ ಹಾಗೂ ಇತರೆ ಶಾಸಕರನ್ನು ಕರೆತಂದರೆ₹25 ಕೋಟಿ ಆಮಿಷ ಒಡ್ಡಿರುವುದಾಗಿ ಅವರು ಹೇಳಿದ್ದಾರೆ.

ಎಎಪಿ ಶಾಸಕರಾದ ಅಜಯ್ ದತ್, ಸಂಜೀವ್ ಜಾ, ಸೋಮನಾಥ ಭಾರತಿ ಮತ್ತು ಕುಲದೀಪ್ ಕುಮಾರ್ ಅವರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದಾರೆ ಎಂದವರು ಹೇಳಿದರು.

ಒಂದು ವೇಳೆ ಬಿಜೆಪಿ ಪ್ರಸ್ತಾಪವನ್ನು ಒಪ್ಪದಿದ್ದರೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಂತೆಯೇ ನಮ್ಮ ಶಾಸಕರ ಮೇಲೂ ಸಿಬಿಐ, ಇ.ಡಿ ಸೇರಿದಂತೆ ತನಿಖಾ ಸಂಸ್ಥೆಗಳು ಸುಳ್ಳು ಮೊಕದ್ದಮೆ ಹೂಡುವ ಬೆದರಿಕೆ ಹಾಕಲಾಗಿದೆ ಎಂದು ಅವರು ತಿಳಿಸಿದರು.

ತನಿಖಾ ಸಂಸ್ಥೆಗಳ ದುರ್ಬಳಕೆಯಿಂದ ಎಎಪಿ ಒಡೆಯುವುದರೊಂದಿಗೆ ದೆಹಲಿ ಸರ್ಕಾರವನ್ನು ಉರುಳಿಸಲು ಪ್ರಧಾನಿ ನರೇಂದ್ರ ಮೋದಿ ಯತ್ನಿಸುತ್ತಿದ್ದಾರೆ. ಶಾಸಕರಿಗೆ ಆಮಿಷ ಒಡ್ಡಲಾಗಿದ್ದು, ಪಕ್ಷಾಂತರ ಮಾಡದಿದ್ದರೆ ಪ್ರಕರಣ ಎದುರಿಸುವ ಬೆದರಿಕೆ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.

ಬಿಜೆಪಿಯ ಈ ತಂತ್ರಗಾರಿಕೆಯು ಮಹಾರಾಷ್ಟ್ರದಲ್ಲಿ (ಶಿವಸೇನಾ ಶಾಸಕ ಏಕನಾಥ ಶಿಂದೆ) ಯಶಸ್ವಿ ಕಂಡಿದೆ. ಆದರೆ ದೆಹಲಿಯಲ್ಲಿ ವಿಫಲವಾಗಿದೆ. ಆದ್ದರಿಂದ ಈಗ ಶಾಸಕರ ಮೇಲೆ ಆಮಿಷ ಒಡ್ಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಮೋದಿ ಅವರೇ ನಿಮಗೆ ನಾಚಿಕೆಯಾಗಬೇಕು. ಇಂತಹ ಕೆಲಸಗಳನ್ನು ನಿಲ್ಲಿಸಿ ದೇಶವು ಎದುರಿಸುತ್ತಿರುವ ಬೆಲೆ ಏರಿಕೆ ಹಾಗೂ ನಿರುದ್ಯೋಗದಂತಹ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಿ ಎಂದು ಅವರು ಹೇಳಿದರು.

ಇದನ್ನೂ ಓದಿ:

ಇತ್ತೀಚೆಗೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಾದ ಬಳಿಕ ಎಎಪಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದರೆ ಸಿಎಂ ಸ್ಥಾನ ಹಾಗೂ ಸಿಬಿಐ ಹಾಗೂ ಇ.ಡಿ ಪ್ರಕರಣ ಕೈಬಿಡುವುದಾಗಿ ತಮಗೆ ಬಿಜೆಪಿ ಆಮಿಷ ಒಡ್ಡಿರುವುದಾಗಿ ಸಿಸೋಡಿಯಾ ಆರೋಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.