ADVERTISEMENT

ಚುನಾವಣೆ ಗಮನದಲ್ಲಿಟ್ಟುಕೊಂಡು ದಿ ಕಾಶ್ಮೀರ್‌ ಫೈಲ್ಸ್‌ಗೆ ಬಿಜೆಪಿ ಪ್ರಚಾರ: ರಾವುತ್

ಪಿಟಿಐ
Published 20 ಮಾರ್ಚ್ 2022, 12:53 IST
Last Updated 20 ಮಾರ್ಚ್ 2022, 12:53 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ಮುಂಬೈ: ಮುಂಬರುವ ಗುಜರಾತ್‌ ಹಾಗೂ ರಾಜಸ್ಥಾನ ವಿಧಾನಸಭೆ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿಯು ‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರಕ್ಕೆ ಪ್ರಚಾರ ನೀಡುತ್ತಿದೆ ಎಂದು ಶಿವಸೇನಾ ಸಂಸದ ಸಂಜಯ್‌ ರಾವುತ್‌ ಭಾನುವಾರ ಆರೋಪಿಸಿದ್ದಾರೆ.

ಈ ಚಿತ್ರದಲ್ಲಿ ಹಲವು ಕಟು ಸತ್ಯಗಳನ್ನು ಹತ್ತಿಕ್ಕಲು ಪ್ರಯತ್ನಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಅಧಿಕಾರಕ್ಕೆ ಬಂದ ನಂತರ ಕಾಶ್ಮೀರಿ ಪಂಡಿತರನ್ನು ಕಾಶ್ಮೀರಕ್ಕೆ ಮರಳಿ ತರುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ 370ನೇ ವಿಧಿಯನ್ನು ರದ್ದುಗೊಳಿಸಿದರೂ ಅದು ಸಾಧ್ಯವಾಗಿಲ್ಲ. ಇದು ಯಾರ ವೈಫಲ್ಯ ಎಂದು ತಿಳಿಯಬೇಕಿದೆ ಎಂದು ರಾವುತ್‌ ಅವರು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿಯ ತಮ್ಮ ವಾರದ ಅಂಕಣದಲ್ಲಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೊದಿ ಅವರು ಚಿತ್ರದ ಪ್ರಮುಖ ಪ್ರಚಾರಕರಾಗಿದ್ದಾರೆ ಎಂದು ರಾವುತ್‌ ಕುಟುಕಿದ್ದಾರೆ.

‘ಕಾಶ್ಮೀರದಲ್ಲಿ ಹಿಂದೂ ಪಂಡಿತರ ವಲಸೆ, ಅವರ ಹತ್ಯೆ, ಅವರ ಮೇಲೆ ನಡೆಸಿದ ದೌರ್ಜನ್ಯಗಳು ಹಾಗೂ ಅವರ ಹತಾಶ ಭಾವಗಳು ಮನಕಲುಕುವ ಬಗೆಯಲ್ಲಿ ಕಥೆಯನ್ನು ಚಿತ್ರಿಸಲಾಗಿದೆ. ಆದರೆ ಈ ಕಥೆಯ ಮೂಲಕ ಹಿಂದೂ–ಮುಸ್ಲಿಮರನ್ನು ಮತ್ತೆ ವಿಭಜಿಸುವ ಪ್ರಯತ್ನದ ಮೂಲಕ ಮುಂಬರುವ ಚುನಾವಣೆಯಲ್ಲಿ ಗೆಲ್ಲಲು ಯೋಚಿಸಿರುವುದು ಮನಕಲುಕುತ್ತದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.